ADVERTISEMENT

ಮೈಸೂರು | ಜಿಲ್ಲೆಗಳಲ್ಲಿ ಸೆಟಲೈಟ್‌ ಹೃದ್ರೋಗ ಕೇಂದ್ರ: ಡಾ.ಬಿ. ದಿನೇಶ್‌

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 5:16 IST
Last Updated 15 ಸೆಪ್ಟೆಂಬರ್ 2025, 5:16 IST
ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಭಾನುವಾರ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಬಿ. ದಿನೇಶ್‌ ದಂಪತಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದರು
ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಭಾನುವಾರ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಬಿ. ದಿನೇಶ್‌ ದಂಪತಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದರು   

ಮೈಸೂರು: ‘ಭವಿಷ್ಯದಲ್ಲಿ ಹೆಚ್ಚಾಗುವ ಜನಸಂಖ್ಯೆ ಗಮನದಲ್ಲಿಟ್ಟುಕೊಂಡು, ಎಲ್ಲರಿಗೂ ಚಿಕಿತ್ಸೆ ದೊರಕಿಸಿಕೊಡಲು ಎಲ್ಲಾ ಜಿಲ್ಲೆಗಳಲ್ಲಿಯೂ ಸೆಟಲೈಟ್‌ ಹೃದ್ರೋಗ ಕೇಂದ್ರ ಆರಂಭಿಸಲಾಗುವುದು’ ಎಂದು ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಬಿ. ದಿನೇಶ್‌ ತಿಳಿಸಿದರು.

ಇಲ್ಲಿನ ಸುತ್ತೂರು ಶಾಖಾ ಮಠದಲ್ಲಿ ಭಾನುವಾರ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

‘2040ರ ವೇಳೆಗೆ ಜನಸಂಖ್ಯೆಯು ಶೇ 15ರಷ್ಟು ಹೆಚ್ಚಾಗುತ್ತದೆ. ಆ ನಿಟ್ಟಿನಲ್ಲಿ ಸಂಸ್ಥೆಯು ಅಗತ್ಯ ಮೂಲಸೌಕರ್ಯ ವೃದ್ಧಿಸಿಕೊಂಡು ಸೇವೆ ವಿಸ್ತರಿಸಿಕೊಳ್ಳಬೇಕಿದೆ. ಜೊತೆಗೆ, ಪ್ರತಿ ಜಿಲ್ಲೆಗೊಂದು ಸೆಟಲೈಟ್‌ ಸೆಂಟರ್‌ ಮಾಡಲು ಪ್ರಯತ್ನಿಸಲಾಗುತ್ತಿದೆ. ಈ ಬಗ್ಗೆ ಸರ್ಕಾರದಿಂದ ಅನುಮೋದನೆ ಪಡೆದು ಸದ್ಯದಲ್ಲಿ ಕಾರ್ಯರೂಪಕ್ಕೆ ತರಲಾಗುವುದು’ ಎಂದರು.

ADVERTISEMENT

‘ರಾಜ್ಯದಾದ್ಯಂತ ಪುನೀತ್‌ ರಾಜ್‌ಕುಮಾರ್‌ ‘ಸ್ಟೆಮಿ’ ಯೋಜನೆ ಜಾರಿಯಲ್ಲಿದೆ. ಇದರಿಂದ ತಾಲ್ಲೂಕು ಹಂತದಲ್ಲಿಯೇ ಹೃದ್ರೋಗಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ ‘ಸ್ಟೆಪ್ಟೊಕೈನಸ್‌’ ಮತ್ತು ‘ಟೆನೆಕ್ಟಿವ್‌ ಪ್ಲಸ್‌’ ಎಂಬ ಎರಡು ಚುಚ್ಚುಮದ್ದು ನೀಡುವ ಪ್ರಾಥಮಿಕ ಚಿಕಿತ್ಸೆ ಸಿಗುವಂತೆ ಮಾಡಲಾಗಿದೆ. ಇದರಿಂದ ತಾಲ್ಲೂಕು ಮಟ್ಟದಲ್ಲಿಯೇ ‘ಗೋಲ್ಡನ್‌ ಅವರ್‌’ನಲ್ಲಿ ಚಿಕಿತ್ಸೆ ದೊರೆಯುತ್ತಿದೆ. ಇದರಿಂದ ಸಾವಿರಾರು ಹೃದ್ರೋಗಿಗಳ ಜೀವ ಉಳಿದಿದೆ. ಹಾಗಾಗಿ ಈ ಯೋಜನೆಯ ಮತ್ತಷ್ಟು ಬಲವರ್ಧನೆಗೆ ಕ್ರಮ ವಹಿಸಲಾಗುವುದು’ ಎಂದು ಹೇಳಿದರು.

‘ಮೈಸೂರಿನ ಜಯದೇವ ಆಸ್ಪತ್ರೆಗೆ ಐದು ಜಿಲ್ಲೆಗಳಿಂದ ಜನರು ಹೆಚ್ಚಾಗಿ ಬರುತ್ತಿದ್ದಾರೆ. ಅಲ್ಲದೇ ನೆರೆಯ ಕೇರಳ, ತಮಿಳುನಾಡಿನಿಂದಲೂ ರೋಗಿಗಳು ಬರುತ್ತಿದ್ದಾರೆ. ಆದರೆ ಇಲ್ಲಿ ಶೇ 20ರಷ್ಟು ವೈದ್ಯರು, ಶೇ 18ರಷ್ಟು ದಾದಿಯರು, ಶೇ 15ರಷ್ಟು ಗ್ರೂಪ್‌ ‘ಡಿ’ ಸಿಬ್ಬಂದಿ ಕೊರತೆ ಇದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಆಗ ಒಪಿಡಿ ಸೇವೆ ನೀಡುವಲ್ಲಿ ಆಗುತ್ತಿರುವ ವಿಳಂಬ ತಪ್ಪಲಿದೆ’ ಎಂದು ತಿಳಿಸಿದರು.

ಜಯದೇವ ಆಸ್ಪತ್ರೆಯಲ್ಲಿ ಇನ್ನೂ ಹೆಚ್ಚಿನ ಗುಣಾತ್ಮಕ ಚಿಕಿತ್ಸೆ ದೊರೆಯುವಂತೆ ಆಡಳಿತ ನಡೆಸಬೇಕು. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು
ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸುತ್ತೂರು ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.