ಸಾಲಿಗ್ರಾಮ: ಮೈಸೂರು ಜಿಲ್ಲೆಯ 9ನೇ ತಾಲ್ಲೂಕು ಕೇಂದ್ರವಾಗಿರುವ ಸಾಲಿಗ್ರಾಮಕ್ಕೆ 98 ಗ್ರಾಮಗಳನ್ನು ಸೇರ್ಪಡೆ ಮಾಡಿ ಕಂದಾಯ ಇಲಾಖೆ ಈಚೆಗೆ ಆದೇಶ ಹೊರಡಿಸಿದ್ದರಿಂದ ಪಟ್ಟಣದ ಜನತೆ ಸಿಹಿ ಹಂಚಿ ಸಂಭ್ರಮಿಸಿದರು.
ಪಟ್ಟಣದ ಯೋಗನರಸಿಂಹಸ್ವಾಮಿ ದೇವಾಲಯಕ್ಕೆ ವಿಶೇಷ ಪೂಜೆ ಸಲ್ಲಿಸಿ, ಗಾಂಧಿ ವೃತ್ತಕ್ಕೆ ಬಂದ ಜನ ಗಾಂಧಿ ಪ್ರತಿಮೆಗೆ ಹೂವಿನ ಹಾರ ಹಾಕಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂತಸಪಟ್ಟರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಮೆಡಿಕಲ್ ರಾಜಣ್ಣ ಮಾತನಾಡಿ, ‘ನಮ್ಮೂರಿನವರೇ ಆದ ಸಾ.ರಾ.ಮಹೇಶ್ ಶಾಸಕರಾಗುತ್ತಿದ್ದಂತೆ ಸಾಲಿಗ್ರಾಮವನ್ನು ತಾಲ್ಲೂಕು ಕೇಂದ್ರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿ ಸೋಮು ಮಾತನಾಡಿ, ‘ಸಾಲಿಗ್ರಾಮ ತಾಲ್ಲೂಕು ಕೇಂದ್ರ ಆಗಿದ್ದರಿಂದ ವ್ಯಾಪಾರ ವಹಿವಾಟು ವೃದ್ಧಿಯಾಗುತ್ತದೆ. ರೈತರ ಏಳಿಗೆಗೂ ನೆರವಾಗುತ್ತದೆ’ ಎಂದರು.
ಜೈನ ಸಮುದಾಯದ ಮುಖಂಡರಾದ ರಾಜಣ್ಣ, ನೇಮಿಚಂದ್ರ, ಹೇಮಂತ್, ಸುನೀಲ್, ಟೀ ರಾಜಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಅಂಕನಹಳ್ಳಿ ವಿಷಕಂಠೇಗೌಡ, ಎಂ.ಎಸ್.ರಮೇಶ್, ಮುಸ್ಲಿಂ ಮುಖಂಡರಾದ ಲಾಲೂಸಾಬ್, ಅಯಾಜ್, ಏಜಾಜ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಾಪಣ್ಣ, ಉಪ್ಪಾರ ಸಮಾಜದ ಮುಖಂಡ ಎಲೆ ಜಯರಾಮ್, ದೀಪಾರಾಮ್, ವಕೀಲ ಜಗ್ನನಾಥ್, ಇತರರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.