ADVERTISEMENT

ಮೈಸೂರು: ಸಿಇಎಸ್‌ಸಿಕೆ ‘ಮರಳಿ ಮನೆ’ಗೆ ಸ್ಥಳಾಂತರ

ಮೈಸೂರು ವಿಶ್ವವಿದ್ಯಾಲಯಕ್ಕೊಂದು ಗರಿಮೆಯ ಗರಿ- ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 1:36 IST
Last Updated 2 ನವೆಂಬರ್ 2020, 1:36 IST
ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಸ್ಥಾನಾಂತರ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯ ಎನ್.ಸಿ.ಎಚ್.ಎಸ್. ಅತಿಥಿಗೃಹದ ಆವರಣದಲ್ಲಿ ಭಾನುವಾರ ಉದ್ಘಾಟಿಸಲಾಯಿತು. ಯೋಜನಾ ಪರಿವೀಕ್ಷಣಾ ಸದಸ್ಯ ನೀಲಗಿರಿ ಎಂ ತಳವಾರ್, ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಬಿ.ಶಿವರಾಮಶೆಟ್ಟಿ ಇದ್ದಾರೆ (ಎಡಚಿತ್ರ). ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಸ್ಥಾನಾಂತರ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ, ಮೈಸೂರು ವಿ.ವಿ ಕುಲಪತಿ ‌ಹೇಮಂತಕುಮಾರ್, ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಸಿ.ಜಿ.ವೆಂಕಟೇಶ ಮೂರ್ತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಆನ್ ಲೈನ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾದರು
ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಸ್ಥಾನಾಂತರ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯ ಎನ್.ಸಿ.ಎಚ್.ಎಸ್. ಅತಿಥಿಗೃಹದ ಆವರಣದಲ್ಲಿ ಭಾನುವಾರ ಉದ್ಘಾಟಿಸಲಾಯಿತು. ಯೋಜನಾ ಪರಿವೀಕ್ಷಣಾ ಸದಸ್ಯ ನೀಲಗಿರಿ ಎಂ ತಳವಾರ್, ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಬಿ.ಶಿವರಾಮಶೆಟ್ಟಿ ಇದ್ದಾರೆ (ಎಡಚಿತ್ರ). ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಸ್ಥಾನಾಂತರ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ, ಮೈಸೂರು ವಿ.ವಿ ಕುಲಪತಿ ‌ಹೇಮಂತಕುಮಾರ್, ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಸಿ.ಜಿ.ವೆಂಕಟೇಶ ಮೂರ್ತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಆನ್ ಲೈನ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾದರು   

ಮೈಸೂರು: ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು (ಸಿಇಎಸ್‌ಸಿಕೆ) ಭಾನುವಾರ ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಎನ್‌ಸಿಎಚ್‌ಎಸ್‌ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.

ಈ ವೇಳೆ ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ, ‘ಕನ್ನಡ ಸೇರಿದಂತೆ ಇತರ ಎಲ್ಲ ಭಾಷೆಗಳು ಇಂಗ್ಲಿಷ್‌ನ ಪ್ರಭಾವಕ್ಕೆ ಒಳಪಟ್ಟಿವೆ. ಇಂಗ್ಲಿಷ್ ಭಾಷೆಯು‌ಅನ್ನದ ಭಾಷೆ ಎಂಬ ಭ್ರಮೆಯನ್ನು ಮೆಕಾಲೆಯ ಶಿಕ್ಷಣ ನೀತಿ ಸೃಷ್ಟಿಸಿದೆ. ಇಂಗ್ಲಿಷ್‌ ಹೊರತಾದ ಸ್ವತಂತ್ರ ಅಸ್ಮಿತೆಯನ್ನು ಕಂಡುಕೊಳ್ಳಬೇಕಿದೆ’ ಎಂದರು.

ಭಾರತೀಯ ಭಾಷಾ ಸಂಸ್ಥಾನವು ಎಲ್ಲ ವಿಶ್ವವಿದ್ಯಾಲಯಗಳೊಂದಿಗೆ ನಿಕಟ ಸಂಬಂದ ಹೊಂದಬೇಕು. ಅಲ್ಲಿನ ಪ್ರಾಧ್ಯಾಪಕರನ್ನು ತಮ್ಮವರಂತೆ ಪರಿಭಾವಿಸಬೇಕು. ಅವರ ಪ್ರತಿಭೆಯನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ಪತ್ರಿಕೆಗಳು ಬಳಸುವಂಥ ಭಾಷೆ ಯನ್ನು ಸೂಕ್ಷ್ಮವಾಗಿ ಗ್ರಹಿಸುವ ಮೂಲಕ ಭಾಷಾ ಬೆಳವಣಿಗೆಗೆ ಗಂಭೀರ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಮಾತನಾಡಿ, ‘ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಭೌತಿಕವಾಗಿ ಸ್ಥಳಾಂತರಗೊಂಡಿದೆ. ಸ್ವಾಯತ್ತೆಯತ್ತ ಇನ್ನು ಹೆಜ್ಜೆ ಇಡಬೇಕಿದೆ. ಒಗ್ಗಟ್ಟಿನಿಂದ ಕನ್ನಡ ಕಟ್ಟುವ ನಿಟ್ಟಿನಲ್ಲಿ ದಾಪುಗಾಲಿಡಬೇಕಿದೆ’ ಎಂದರು.

ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ‘ಕೇಂದ್ರವು ಮರಳಿ ಮನೆಗೆ ಬಂದಂತಾ ಯಿತು’ ಎಂದು ಹರ್ಷ ವ್ಯಕ್ತಪಡಿಸಿದರು.

ನೂತನ ಕಟ್ಟಡಕ್ಕೆ 4 ಎಕರೆ 2 ಗುಂಟೆ ಜಾಗ ನೀಡಲಾಗಿದೆ. ಬೇಕಿದ್ದರೆ ಕನ್ನಡಕ್ಕಾಗಿ ಇನ್ನಷ್ಟು ಜಾಗ ನೀಡಲು ಸಿದ್ಧ ಎನ್ನುವ ಮೂಲಕ ಎಲ್ಲರ ಕರತಾಡನಕ್ಕೆ ಕಾರಣವಾದರು.‌

ಇದೇ ವೇಳೆ ಅವರು ‘ಕುಳಿತಲ್ಲೇ ಕುಳಿತು ಬೇಡಿದರೆ ಪ್ರಯೋಜನವಿಲ್ಲ. ಎದ್ದು ಹೋಗಿ ಬಾಗಿಲು ತಟ್ಟಬೇಕು’ ಎನ್ನುವ ಬೈಬಲ್‌ನ ವಾಕ್ಯವನ್ನು ಪ್ರಸ್ತಾಪಿಸಿ, ಇನ್ನು ಕೇಂದ್ರವು ಸಮಯ ವ್ಯರ್ಥ ಮಾಡದೆ ಕಾರ್ಯೋನ್ಮುಖವಾಗಬೇಕು ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ನೂತನ ಕಟ್ಟಡದ ಆವರಣದಲ್ಲಿ ಕನ್ನಡ ಧ್ವಜಾರೋಹಣ ಮಾಡಲಾಯಿತು. ಕೇಂದ್ರದ ಯೋಜನಾ ಪರಿವೀಕ್ಷಣಾ ಸದಸ್ಯರಾದ ಪ್ರೊ.ಎನ್.ಎಂ.ತಳವಾರ್, ಎನ್.ಎಸ್.ತಾರಾನಾಥ್ ಇದ್ದರು.

ಚರ್ಚೆ ಹುಟ್ಟು ಹಾಕಿದ್ದೇ ‘ಪ‍್ರಜಾವಾಣಿ’

ವಿದ್ವಾಂಸ ಪ್ರೊ.ಆರ್‌ವಿಎಸ್‌ ಸುಂದರಂ ಮಾತನಾಡಿ, ‘ತಮಿಳು ಭಾಷೆಗೆ 2004ರಲ್ಲಿ ಶಾಸ್ತ್ರೀಯ ಸ್ಥಾನಮಾನ ದೊರೆತ ತಕ್ಷಣವೇ ‘ಪ್ರಜಾವಾಣಿ’ ದಿನಪತ್ರಿಕೆಯು ‘ಕನ್ನಡ ಪ್ರಾಚೀನ ಭಾಷೆ ಅಲ್ಲವೇ?‌’ ಎಂಬ ಲೇಖನವನ್ನು ಪ್ರಕಟಿಸುವ ಮೂಲಕ ಕನ್ನಡಕ್ಕೂ ಶಾಸ್ತ್ರೀಯ ಸ್ಥಾನಮಾನ ಸಿಗಬೇಕು ಎಂಬ ಚರ್ಚೆಯನ್ನು ಹುಟ್ಟು ಹಾಕಿತು’ ಎಂದು ನೆನಪು ಮಾಡಿಕೊಂಡರು.

‘ಅಕ್ಕ’ ಜತೆ ಮೈಸೂರು ವಿಶ್ವವಿದ್ಯಾನಿಲಯ ಒಪ್ಪಂದ

ಅಮೆರಿಕದಲ್ಲಿರುವ ಕನ್ನಡ ಬಳಗ ‘ಅಕ್ಕ’ ಸಂಘಟನೆ ಜತೆ ಮೈಸೂರು ವಿಶ್ವವಿದ್ಯಾನಿಲಯವು ಸರ್ಟಿಫಿಕೆಟ್ ಕೋರ್ಸ್‌ ನೀಡುವ ಒಪ್ಪಂದ ಮಾಡಿಕೊಂಡಿದೆ ಎಂದು ಮೈಸೂರು ವಿ.ವಿ. ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.