
ಮೈಸೂರು: ಚಾಮುಂಡಿ ಬೆಟ್ಟಕ್ಕೆ ಬುಧವಾರ ರಾತ್ರಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಲು ಬಂದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರನ್ನು ಸ್ಥಳೀಯರು ಸುತ್ತುವರಿದು ‘ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ದೇವಸ್ಥಾನಕ್ಕೆ ತೊಂದರೆಯಾಗುತ್ತಿದೆ. ಇದನ್ನು ನಿಲ್ಲಿಸಲು ಕ್ರಮವಹಿಸಿ’ ಎಂದು ಮನವಿ ಮಾಡಿದರು.
‘ಇಲ್ಲಿ ವೇದಿಕೆ ನಿರ್ಮಾಣ ಮಾಡಿದರೆ ಭಕ್ತರು ತಿರುಗಾಡಲು ಆಗುವುದಿಲ್ಲ. ದೇವಾಲಯದ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಯಾವುದೇ ಯೋಜನೆ ರೂಪಿಸುವಾಗಲೂ, ಜಾತ್ರಾ ಸಮಯದಲ್ಲೂ ನಮ್ಮನ್ನು ವಿಶ್ವಾಸಕ್ಕೆ ತಗೆದುಕೊಳ್ಳುವುದಿಲ್ಲ. ನಮ್ಮಿಂದ ಯಾವ ಸಲಹೆ ಸೂಚನೆ ಪಡೆಯುವುದಿಲ್ಲ’ ಎಂದು ಆರೋಪಿಸಿದರು.
‘ಕಾಮಗಾರಿ ಮಾಡಬಾರದು ಎಂದು ಸಂಬಂಧಪಟ್ಟವರಿಗೆ ತಿಳಿಸಿದ್ದೇವೆ’ ಎಂದು ಗ್ರಾಮಸ್ಥರು ತಿಳಿಸಿದರು.
ಪ್ರಮೋದಾದೇವಿ ಒಡೆಯರ್ ಪ್ರತಿಕ್ರಿಯಿಸಿ, ‘ಪ್ರಾಧಿಕಾರದ ವಿಚಾರವು ನ್ಯಾಯಾಲಯದಲ್ಲಿ ಇದೆ. ಅಲ್ಲಿ ಯಾವ ರೀತಿ ತೀರ್ಪು ಬರುತ್ತದೆ ನೋಡಿಕೊಂಡು, ಮುಂದಿನ ನಡೆ ನಿರ್ಧರಿಸುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.