
ಮೈಸೂರು: ಕ್ರಿಸ್ಮಸ್ ಹಬ್ಬದ ತಯಾರಿಯ ಜೋರು ಹೆಚ್ಚಿರುವಾಗಲೇ ಇಲ್ಲಿನ ಸೇಂಟ್ ಫಿಲೊಮಿನಾ ಚರ್ಚ್ನಲ್ಲಿ ಸಂಗೀತ, ನೃತ್ಯ, ಹಾಡುಗಳ ಅಭ್ಯಾಸ ನಡೆಸಿದ್ದರೆ, ಹಬ್ಬಕ್ಕೆ ಬೇಕಾದ ಅಲಂಕಾರಿಕ ವಸ್ತುಗಳನ್ನು ಕೊಳ್ಳಲು ಜನಜಾತ್ರೆಯೇ ಶುಕ್ರವಾರ ಸೃಷ್ಟಿಯಾಗಿತ್ತು.
ಕ್ರಿಸ್ಮಸ್ ‘ಕಾರ್ನಿವಲ್’ ಪ್ರಯುಕ್ತ ಆಯೋಜಿಸಿದ್ದ ಮಾರಾಟ ಮೇಳದ ಜೊತೆಗೆ ಚರ್ಚ್ನಲ್ಲಿ ಅಲಂಕೃತಗೊಂಡ ಗೋದಲಿಗಳು, ಐಫೆಲ್ ಟವರ್ ಮಾದರಿಯನ್ನು ಕ್ರೈಸ್ತ ಸಮುದಾಯದವರು ಕಣ್ತುಂಬಿಕೊಂಡರು.
30 ಮಳಿಗೆಗಳಲ್ಲಿ ಇಡಲಾಗಿದ್ದ ಕ್ರಿಸ್ಮಸ್ ಟ್ರೀ, ಬಣ್ಣ ಬಣ್ಣದ ಬೆಲ್ಸ್, ಕಣ್ಣು ಕುಕ್ಕುವ ಸಾಂತಾಕ್ಲಾಸ್ ಡ್ರೆಸ್, ತರಾವರಿ ಬಣ್ಣದ ಮೇಣದ ಬತ್ತಿಗಳು, ಕ್ರಿಸ್ಮಸ್ ಬೊಂಬೆಗಳನ್ನು ಖರೀದಿಸಿದರು.
ವೈವಿಧ್ಯಮಯ ಕೇಕ್ಗಳು, ಕ್ರಿಸ್ಮಸ್ನ ವಿಶೇಷ ಖಾದ್ಯಗಳನ್ನು ಪ್ರದರ್ಶಿಸಲಾಗಿದೆ. ಫುಡ್ ಐಟಂಗಳು, ಪಾರ್ಟಿಗೆ ಬೇಕಾಗುವಂತಹ ಕೇಕ್ ನೋಡಗರ ಬಾಯಲ್ಲಿ ನೀರೂರಿಸುತ್ತವೆ.
ಐಫೆಲ್ ಟವರ್ ಆಕರ್ಷಣೆ
ಕಾರ್ನಿವಲ್ ಸ್ಥಳದಲ್ಲಿ ಪ್ಯಾರಿಸ್ನ ಐಫೆಲ್ ಟವರ್ನ ಮಾದರಿಯ ನೋಟವನ್ನು ಕಣ್ತುಂಬಿಕೊಳ್ಳಬಹುದು. ಸುಮಾರು 16 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದ್ದು, ನೋಡಗರನ್ನು ಆಕರ್ಷಿಸುತ್ತಿದೆ.
21ರಂದು ಕ್ರಿಸ್ಮಸ್ ಕಾಂತಾತಾ ಕಾರ್ಯಕ್ರಮ ನಡೆಯಲಿದೆ. ಧ್ವನಿ ಮತ್ತು ಬೆಳಕಿನ ಮೂಲಕ ಯೇಸು ಕ್ರಿಸ್ತನ ಜೀವನ ಸಂದೇಶ ಸಾರುವ ಸಂಗೀತ ಕಾರ್ಯಕ್ರಮ ನಡೆಸಲಾಗುತ್ತದೆ. ಯೇಸುಕ್ರಿಸ್ತರು ಜನಿಸಿದ ಗೋದಲಿಯ ಸನ್ನಿವೇಶವನ್ನು 3ಡಿ ಮಾದರಿಯಲ್ಲಿ ತಯಾರಿಸಲಾಗುತ್ತಿರುವುದು ವಿಶೇಷ.
ಕಾರ್ನಿವಲ್ ಬೆಳಿಗ್ಗೆ 12ರಿಂದ ರಾತ್ರಿ 9.30ರವರೆಗೆ ನಡೆಯಲಿದ್ದು, ಪ್ರವೇಶ ಉಚಿತವಾಗಿದೆ. ಎಲ್ಲರೂ ಭಾಗವಹಿಸಿ ಹಬ್ಬದ ವಾತಾವರಣ ಅನುಭವಿಸಬಹುದು.
ಕ್ರಿಸ್ಮಸ್ ‘ಕಾರ್ನಿವಲ್’ ಅದ್ಭುತ ಲೋಕವನ್ನಾಗಿ ಸೃಷ್ಟಿಸಿದೆ. ಹಬ್ಬಕ್ಕೆ ಸಂಬಂಧಿಸಿದ್ದನ್ನು ಶಾಪಿಂಗ್ ಇಲ್ಲಿಯೇ ಮಾಡಬಹುದು.– ಜೋಸೆಫ್ ಸರಸ್ವತಿಪುರಂ
‘ತನ್ನನ್ನು ತಾನು ಅರಿಯಿರಿ ಮನುಷ್ಯತ್ವ ಬೆಳೆಸಿಕೊಳ್ಳಿ’
ಮೈಸೂರು: ‘ಪ್ರತಿಯೊಬ್ಬ ಮನುಷ್ಯ ಜೀವನದಲ್ಲಿ ತನ್ನನ್ನು ತಾನು ಅರಿಯಬೇಕು. ಮನುಷ್ಯತ್ವ ಬೆಳೆಸಿಕೊಳ್ಳಬೇಕು. ಇದರಿಂದ ಜೀವನ ಸಾರ್ಥಕ’ ಎಂದು ಮೈಸೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ( ಬಿಷಪ್) ಫ್ರಾನ್ಸಿಸ್ ಸೆರಾವೋ ಹೇಳಿದರು.
ಕಾರ್ನಿವಲ್ ಉದ್ಘಾಟಿಸಿ ಮಾತನಾಡಿದ ಅವರು ‘ಸ್ವಾರ್ಥ ತನ್ನ ತನ ಬಿಟ್ಟು ಪರರಲ್ಲಿ ಒಂದಾಗಿ ಬಾಳಿದಾಗ ನಾವು ಮನುಷ್ಯರಾಗುತ್ತೇವೆ. ಮನುಷ್ಯ ತನ್ನಲಿನ ಪಶುತ್ವ ಬಿಟ್ಟು ದೈವತ್ವ ಪಡೆದು ದೇವರಲ್ಲಿ ಒಂದಾಗಿ ಬಾಳಬೇಕು’ ಎಂದರು.
‘ನಮ್ಮ ನೋವು ನಮಗೆ ತಿಳಿದಲ್ಲಿ ನಾವು ಜೀವಂತವಾಗಿದ್ದೇವೆ. ಆದರೆ ಪರರ ನೋವು ತಿಳಿದಲ್ಲಿ ನಾವು ಮನುಷ್ಯರಾಗಿದ್ದೇವೆ ಎಂದರ್ಥ. ಇನ್ನೊಬ್ಬರ ನೋವಿಗೆ ಸ್ಪಂದಿಸಬೇಕು ಅವರ ನೋವಿನಲ್ಲಿ ಭಾಗಿಯಾಗಬೇಕು. ಆಗ ನಾವು ಮನುಷ್ಯರಾಗಲು ಸಾಧ್ಯ’ ಎಂದು ತಿಳಿಸಿದರು.
‘ಕ್ರಿಸ್ಮಸ್ ಎಂದರೆ ದೇವರು ಮಾನವರು ಆದ್ದಂತಹ ವಿಶೇಷ ಸಂದರ್ಭ. ದೇವರು ನಾವಿದ್ದ ಕಡೆಗೆ ಬಂದಂತಹ ಸುದಿನ. ದೇವರು ನಮ್ಮ ಹಾಗೇ ಯಾಕೆ ಮನುಷ್ಯರಾಗಿ ಬಂದರು ಎಂದರೆ ಮನುಷ್ಯ ದೇವರಲ್ಲಿ ಸೇರಬೇಕು ಎಂಬ ಉದ್ದೇಶದಿಂದ. ಆದರೆ ಇಂದು ಕೂಡ ನಾವು ಮಾನವರಾಗಿಲ್ಲ. ಆಕಾಶದಲ್ಲಿ ಹಾರುವುದು ಕಲಿತೆವು ನೀರಿನಲ್ಲಿ ಈಜುವುದು ಕಲಿತೆವು ಆದರೆ ನೆಲದ ಮೇಲೆ ಮಾನವನಾಗಿ ಇನ್ನು ನಡೆದುಕೊಂಡಿಲ್ಲ’ ಎಂದರು.
ಫಾ.ಅಲೆಕ್ಸ್ ಪ್ರಶಾಂತ್ ಸಿಕ್ವೇರಾ ಮಾತನಾಡಿ ‘24ರಂದು ರಾತ್ರಿ 11ಕ್ಕೆ ಬಾಲ ಯೇಸುವಿನ ಪ್ರತಿಮೆ ಗೋದಲಿಯಲ್ಲಿಟ್ಟು ಪ್ರತಷ್ಠಾಪಿಸಲಾಗುವುದು. ಬಳಿಕ ಬಲಿಪೂಜೆ ಪ್ರಾರಂಭಿಸಲಾಗುವುದು’ ಎಂದು ತಿಳಿಸಿದರು. ಜೀವನ್ ಪ್ರಿತ್ ಆಲಬರ್ಟ್ ಭಾಸ್ಕರ್ ಜಯಂತ್ ಅಂಥನಿ ಪ್ರದೀಪ್ ಅಂಥನಿ ಎಚ್ ವಿಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.