ADVERTISEMENT

ಮೈಸೂರು| ಬೇಡಿಕೆ ಈಡೇರುವವರೆಗೂ ಸಿನಿಮಾ ಪ್ರದರ್ಶನ ಇಲ್ಲ: ಓದುಗೌಡರ್

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 11:07 IST
Last Updated 30 ಅಕ್ಟೋಬರ್ 2020, 11:07 IST

ಮೈಸೂರು: ‘ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಚಲನಚಿತ್ರ ಪ್ರದರ್ಶನ ನಡೆಸುವುದಿಲ್ಲ’ ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳದ ಮುಖ್ಯಸ್ಥ ಆರ್.ಆರ್.ಓದುಗೌಡರ್ ತಿಳಿಸಿದರು.

ಸಿನಿಮಾ ಮಂದಿರದ ಪರವಾನಗಿ ನವೀಕರಣ ಶುಲ್ಕವನ್ನು ಸರ್ಕಾರ ಶೇ 2,250 ಪಟ್ಟು ಹೆಚ್ಚಿಸಿದೆ. ಇದೇ ಕಾರಣಕ್ಕೆ ಹಲವು ಚಿತ್ರಮಂದಿರಗಳು ಶಾಶ್ವತವಾಗಿ ಮುಚ್ಚುವಂತಾಗಿದೆ. ಸರ್ಕಾರ ಕೂಡಲೇ ಇದನ್ನು ಇಳಿಕೆ ಮಾಡಬೇಕು ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಹವಾನಿಯಂತ್ರಿತ ಚಿತ್ರಮಂದಿರಕ್ಕೆ ಸೇವಾಶುಲ್ಕ ಶೇ 10 ಹಾಗೂ ಸಾಮಾನ್ಯ ಚಿತ್ರಮಂದಿರಕ್ಕೆ ಸೇವಾಶುಲ್ಕ ಶೇ 5ರಷ್ಟು ಸಂಗ್ರಹಿಸಲು ಅನುಮತಿ ನೀಡಬೇಕು. ಚಲನಚಿತ್ರ ಮಂದಿರಗಳಿಗೆ ವಿದ್ಯುತ್‌ ಶುಲ್ಕ ವಿಧಿಸುವಾಗ ‘ವಾಣಿಜ್ಯ’ ಎಂದು ಪರಿಗಣಿಸಲಾಗುತ್ತಿದೆ. ‘ಉದ್ಯಮ’ ಎಂದು ಪರಿಗಣಿಸಬೇಕು. ಟ್ರೇಡ್ ಲೈಸೆನ್ಸ್‌ನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಅವರು ಆಗ್ರಹಿಸಿದರು.

ADVERTISEMENT

ಈಗ ಎಲ್ಲ ಚಿತ್ರಮಂದಿರಗಳೂ ಡಿಜಿಟಲ್ ಪ್ರೆಜೆಕ್ಟರ್‌ಗಳನ್ನು ಅಳವಡಿಸಿಕೊಂಡಿರುವುದರಿಂದ ಹಿಂದಿನ ಆಪರೇಟರ್ ಪರವಾನಗಿಯನ್ನು ರದ್ದುಗೊಳಿಸಬೇಕು, ಸ್ಥಳೀಯ ಸಂಸ್ಥೆಗಳು ಚಿತ್ರಮಂದಿರಗಳ ಮೇಲೆ ವಿಧಿಸುತ್ತಿರುವ ಆಸ್ತಿ ತೆರಿಗೆಯನ್ನು ಇಳಿಕೆ ಮಾಡಬೇಕು. 2020–21ರ ಅವಧಿಗೆ ಆಸ್ತಿ ತೆರಿಗೆಯನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಅವರು ಮನವಿ ಮಾಡಿದರು.

ನಿರ್ಮಾಪಕರು ಮತ್ತು ಪ್ರದರ್ಶಕರೊಂದಿಗೆ ಶೇಕಡಾವಾರು ಆಧಾರದ ಮೇಲೆ ಹಂಚಿಕೆ ವ್ಯವಸ್ಥೆ ರೂಪಿಸಬೇಕು. ಇಲ್ಲದೇ ಹೋದರೆ ಯಾವುದೇ ಕಾರಣಕ್ಕೂ ಚಿತ್ರಮಂದಿರಗಳು ಸಿನಿಮಾ ಪ್ರದರ್ಶನವನ್ನು ಪುನರ್ ಆರಂಭಿಸುವುದಿಲ್ಲ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.