
‘ಸ್ವಚ್ಛ ಸರ್ವೇಕ್ಷಣೆ’ ಜಾಗೃತಿ ಅಭಿಯಾನದ ಪ್ರಯುಕ್ತ ಪಾಲಿಕೆಯು ಆಯೋಜಿಸಿರುವ ‘ಸ್ವಚ್ಛತಾ ಓಟ’ ಪೋಸ್ಟರ್ ಅನ್ನು ಆಯುಕ್ತ ಶೇಖ್ ತನ್ವೀರ್ ಆಸೀಫ್ ಸೋಮವಾರ ಬಿಡುಗಡೆ ಮಾಡಿದರು. ಉದ್ಯಮಿ ಶ್ರೀಹರಿ, ಉಪ ಆಯುಕ್ತರಾದ ಜಿ.ಸೋಮಶೇಖರ್, ಸಿ.ಎಸ್.ಮಂಜು, ಎಇಇಗಳಾದ ಮೀನಾಕ್ಷಿ, ಮೃತ್ಯುಂಜಯ ಹಾಜರಿದ್ದರು.
ಪ್ರಜಾವಾಣಿ ಚಿತ್ರ.
ಮೈಸೂರು: ‘ಕೇಂದ್ರ ಸರ್ಕಾರವು ನಡೆಸುವ ‘ಸ್ವಚ್ಛ ಸರ್ವೇಕ್ಷಣೆ’ಯಲ್ಲಿ ನಗರವು ಮತ್ತೆ ಅಗ್ರಸ್ಥಾನ ಪಡೆಯಲು ಜನರ ಸಹಕಾರ ಅಗತ್ಯವಾಗಿದ್ದು, ಜಾಗೃತಿ ಮೂಡಿಸಲು ಫೆ.8ರಂದು ನಾಗರಿಕರಿಗೆ ಓಟದ ಸ್ಪರ್ಧೆ ಆಯೋಜಿಸಲಾಗಿದೆ’ ಎಂದು ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಹೇಳಿದರು.
ನಗರದ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿ, ‘ಕಳೆದ ಬಾರಿ 21ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಮೈಸೂರು ಜಿಗಿದಿತ್ತು. ಈ ಬಾರಿ ದಶಕದ ನಂತರ ಮೊದಲ ಸ್ಥಾನ ಪಡೆಯಲು ಪೌರಕಾರ್ಮಿಕರು, ಅಧಿಕಾರಿಗಳು, ಸಿಬ್ಬಂದಿ ಜೊತೆ ಪ್ರತಿಯೊಬ್ಬ ನಾಗರಿಕರೂ ಕೈ ಜೋಡಿಸಬೇಕು’ ಎಂದರು.
‘ಓಡೋಣ ಮೈಸೂರಿಗಾಗಿ, ಒಂದಾಗೋಣ ಸ್ವಚ್ಛತೆಗಾಗಿ’ ಆಶಯದಲ್ಲಿ 18–40, 40ರಿಂದ ಮೇಲ್ಪಟ್ಟವರಿಗೆ 3 ಕಿ.ಮೀ, 5 ಕಿ.ಮೀ ಹಾಗೂ 10 ಕಿ.ಮೀ ಓಟವು 8ರಂದು ಬೆಳಿಗ್ಗೆ 6ಕ್ಕೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇಗುಲದಿಂದ ಆರಂಭಗೊಳ್ಳಲಿದೆ’ ಎಂದು ತಿಳಿಸಿದರು.
‘3 ಕಿ.ಮೀ ಓಟವು ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಬಸವೇಶ್ವರ ವೃತ್ತ, ಜಯಚಾಮರಾಜೇಂದ್ರ ವೃತ್ತ, ಚಾಮರಾಜೇಂದ್ರ ವೃತ್ತದಲ್ಲಿ ಕೊನೆಯಾದರೆ, 5 ಕಿ.ಮೀ ಓಟ ಪುರಭವನ, ದೊಡ್ಡ ಗಡಿಯಾರ, ದೇವರಾಜ ಅರಸ್ ರಸ್ತೆ, ಜೆಎಲ್ಬಿ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ರಸ್ತೆ, ಬಸವೇಶ್ವರ ವೃತ್ತ, ಜಯಚಾಮರಾಜೇಂದ್ರ ವೃತ್ತ ಮೂಲಕ ಸಾಗಿ ಪುರಭವನದಲ್ಲಿ ಮುಕ್ತಾಯವಾಗಲಿದೆ. 10 ಕಿ.ಮೀ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಇದೇ ಹಾದಿಯಲ್ಲಿ 2 ಬಾರಿ ಓಡಬೇಕಿದೆ’ ಎಂದು ವಿವರಿಸಿದರು.
‘ಪ್ರತಿ ಸ್ಪರ್ಧೆಯಲ್ಲೂ ₹ 10 ಸಾವಿರ, ₹ 5 ಸಾವಿರ ಹಾಗೂ ₹ 3 ಸಾವಿರ ಬಹುಮಾನವಿದ್ದು, ಅದಕ್ಕಾಗಿ ₹ 1.44 ಲಕ್ಷ ಮೀಸಲಿಡಲಾಗಿದೆ. ವಿವಿಧ ಸಂಘ ಸಂಸ್ಥೆಗಳೂ ಪಾಲಿಕೆಯೊಂದಿಗೆ ಕೈ ಜೋಡಿಸಿದ್ದು, ಎಲ್ಲರಿಗೂ ಉಪಾಹಾರದ ವ್ಯವಸ್ಥೆ ಇದೆ. ಪಾಲಿಕೆಯ ವಲಯ ಕಚೇರಿ, ಇಲ್ಲವೇ ವೆಬ್ಸೈಟ್ (www.mysurucity.mrc.gov.in) ಅಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನೋಂದಣಿ ಮಾಡಿಕೊಳ್ಳಬಹುದು’ ಎಂದು ವಿವರಿಸಿದರು.
‘ಸ್ವಚ್ಛತೆ ಸರ್ವೇಕ್ಷಣೆ ಬಗ್ಗೆ ಅರಿವು ಮೂಡಿಸಲು ಈಗಾಗಲೇ ಮಕ್ಕಳಿಗೆ ಚಿತ್ರಕಲೆ, ರಸಪ್ರಶ್ನೆ ಆಯೋಜಿಸಲಾಗಿತ್ತು. 6ರಂದು ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆಗಳ ಮೂಲಕ ಅರಿವು ಮೂಡಿಸಲಾಗಿದೆ. ತ್ಯಾಜ್ಯ ಬಿಸಾಡದಂತೆ, ಹಸಿ– ಕಸ ಒಣಕಸ ವಿಭಾಗಿಸಿ ಸ್ವಚ್ಛತಾ ಸಿಬ್ಬಂದಿಗೆ ನೀಡುವಂತೆ ಮನವರಿಕೆ ಮಾಡಿಕೊಡಲಾಗಿದೆ’ ಎಂದು ವಿವರಿಸಿದರು.
ಉದ್ಯಮಿ ಶ್ರೀಹರಿ, ಉಪ ಆಯುಕ್ತರಾದ ಜಿ.ಸೋಮಶೇಖರ್, ಸಿ.ಎಸ್.ಮಂಜು, ಎಇಇಗಳಾದ ಮೀನಾಕ್ಷಿ, ಮೃತ್ಯುಂಜಯ ಹಾಜರಿದ್ದರು.