ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಪ್ರಾಥಮಿಕ ಶಿಕ್ಷಣ ಪಡೆದ ತಾಲ್ಲೂಕಿನ ಕುಪ್ಪೇಗಾಲ ಹಾಗೂ ಸಿದ್ದರಾಮನಹುಂಡಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ತಲಾ ₹ 10 ಲಕ್ಷ ವೈಯಕ್ತಿಕ ನೆರವು ನೀಡಿದ್ದಾರೆ.
ರಾಜ್ಯ ಸರ್ಕಾರವು ಶಾಲೆಗಳ ಅಭಿವೃದ್ಧಿಗೆ ‘ನನ್ನ ಶಾಲೆ, ನನ್ನ ಜವಾಬ್ದಾರಿ’ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಶಾಲೆಗಳಲ್ಲಿ ಓದಿದ ಹಳೆ ವಿದ್ಯಾರ್ಥಿಗಳಿಗೆ ಶಾಲಾಭಿವೃದ್ಧಿಯ ಜವಾಬ್ದಾರಿಯನ್ನು ನೀಡಲಾಗುತ್ತಿದೆ.
‘ಯೋಜನೆಯ ಆರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಾವು ಓದಿದ ಶಾಲೆಗಳಿಗೆ ದೇಣಿಗೆ ನೀಡಿದ್ದು, ಮಾರ್ಚ್ 7ರಂದು ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ’ ಎಂದು ಡಿಡಿಪಿಐ ಎಚ್.ಕೆ.ಪಾಂಡು ‘ಪ್ರಜಾವಾಣಿ’ಗೆ ತಿಳಿಸಿದರು.
‘ಹತ್ತನೇ ವರ್ಷದವರೆಗೂ ಸಿದ್ದರಾಮಯ್ಯ ಶಾಲೆಗೆ ಹೋಗಿರಲಿಲ್ಲ. ಸಿದ್ದರಾಮನಹುಂಡಿಯಿಂದ 1.5 ಕಿ.ಮೀ ದೂರವಿರುವ ಕುಪ್ಪೇಗಾಲ ಶಾಲೆಗೆ 5ನೇ ತರಗತಿಗೆ ನೇರವಾಗಿ ಪ್ರವೇಶ ಪಡೆದ ಅವರು, 7 ತರಗತಿವರೆಗೂ ಇಲ್ಲಿಯೇ ಶಿಕ್ಷಣ ಪಡೆದಿದ್ದರು’ ಎಂದು ತಿಳಿಸಿದರು.
‘2015–16ರಲ್ಲಿ ಶಾಲೆಗೆ 1 ಎಕರೆ ಜಾಗದಲ್ಲಿ 8 ಕೊಠಡಿ, 2 ಶೌಚಾಲಯ ಹಾಗೂ ಕಾಂಪೌಂಡ್ ಸೇರಿದಂತೆ ಹೊಸ ಕಟ್ಟಡ ಕಟ್ಟಿಸಿಕೊಟ್ಟು ಉನ್ನತೀಕರಿಸಿದ್ದರು, ಇದೀಗ ₹ 10 ಲಕ್ಷ ವೈಯಕ್ತಿಕ ನೆರವು ನೀಡುತ್ತಿದ್ದಾರೆ’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಹೇಳಿದರು.
‘ನೆರವಿನಿಂದ ಸ್ಮಾರ್ಟ್ ಕ್ಲಾಸ್ಗಳನ್ನು ನಡೆಸಲು ಅನುಕೂಲವಾಗುವಂತೆ ಸ್ಮಾರ್ಟ್ ಟಿವಿ, ಪ್ರೊಜೆಕ್ಟರ್ ತರಲಾಗುವುದು. ಕುರ್ಚಿ, ಮೇಜು ಸೇರಿದಂತೆ ಅಗತ್ಯ ಪರಿಕರಗಳನ್ನು ಖರೀದಿಸಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.