ADVERTISEMENT

ಕೊಕೊಪೀಟ್‌ ಸಾವಯವ ಗೊಬ್ಬರ ತಯಾರಿಕೆ

ಕಂಪನಿ ನೌಕರಿ ಬಿಟ್ಟು ಉದ್ಯಮದಲ್ಲಿ ಯಶಸ್ಸು ಕಂಡ ರೈತ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 3:24 IST
Last Updated 15 ಆಗಸ್ಟ್ 2021, 3:24 IST
ಜಯಪುರ ಹೋಬಳಿ ವ್ಯಾಪ್ತಿಯ ಕೋಟೆಹುಂಡಿ ಗ್ರಾಮದ ರೈತ ಶಿವಕುಮಾರ್ ಅವರು ಕೊಕೊಪಿಟ್‌ ತಯಾರಿಸಲು ತೆಂಗಿನ ಕಾಯಿಯ ಸಿಪ್ಪೆಯ ಪುಡಿಯನ್ನು ಕೊಳೆಸಿದರು
ಜಯಪುರ ಹೋಬಳಿ ವ್ಯಾಪ್ತಿಯ ಕೋಟೆಹುಂಡಿ ಗ್ರಾಮದ ರೈತ ಶಿವಕುಮಾರ್ ಅವರು ಕೊಕೊಪಿಟ್‌ ತಯಾರಿಸಲು ತೆಂಗಿನ ಕಾಯಿಯ ಸಿಪ್ಪೆಯ ಪುಡಿಯನ್ನು ಕೊಳೆಸಿದರು   

ಜಯಪುರ: ತಿಂಗಳ ಕೊನೆಯಲ್ಲಿ ಬರುವ ಸಂಬಳವನ್ನು ನೆಚ್ಚಿಕೊಂಡು ಜೀವನ ಸಾಗಿಸಲಾಗದೆ ‘ಎಲ್ ಅಂಡ್ ಟಿ’ ಕಂಪನಿಯ ನೌಕರಿ ಬಿಟ್ಟ, ಕೋಟೆಹುಂಡಿ ಗ್ರಾಮದ ರೈತ ಶಿವಕುಮಾರ್ ‘ಕೊಕೊಪೀಟ್‌’ ಸಾವಯವ ಗೊಬ್ಬರ ತಯಾರಿಸಿ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ತೆಂಗಿನ ತೋಟ ಹೊಂದಿರುವ ಶಿವಕುಮಾರ್‌ ಅವರು, 15 ಗುಂಟೆ ಜಾಗದಲ್ಲಿ ಕೊಕೊಪೀಟ್‌ ಸಾವಯವ ಗೊಬ್ಬರದ ಪ್ಲಾಂಟ್ ನಿರ್ಮಿಸಿದ್ದಾರೆ.

ತೆಂಗಿನ ತೋಟದಲ್ಲಿ ಸಿಗುವ ಕಚ್ಚಾವಸ್ತುಗಳನ್ನು ಬಳಸಿಕೊಂಡು ಗೊಬ್ಬರ ತಯಾರಿಸುತ್ತಿದ್ದಾರೆ. ತೆಂಗಿನಕಾಯಿ ಸಿಪ್ಪೆಯನ್ನು ಆರು ತಿಂಗಳವರೆಗೆ ನೀರಿನಲ್ಲಿ ಕೊಳೆಸಿ ಯಂತ್ರದಲ್ಲಿ ಪುಡಿ ಮಾಡಲಾಗುತ್ತದೆ. ನಂತರ ರಾಶಿಯಾಗಿ ಗುಡ್ಡೆ ಮಾಡಿದ ಒಂದು ಟನ್ಕೊಕೊಪೀಟ್‌ ಪುಡಿಗೆ 250 ಲೀ. ಹಸುವಿನ ಗಂಜಲ ಮತ್ತು ಗೋವಿನ ಸಗಣಿಯನ್ನು ಬೆರೆಸಿ, ಪೂರ್ಣ ಪ್ರಮಾಣದಲ್ಲಿ ನೀರನ್ನು ಹಾಕಿ ಮಿಶ್ರಣ ಮಾಡಲಾಗುತ್ತದೆ. ಈ ರೀತಿ ಮಾಡಿದ 15 ದಿನಗಳೊಳಗೆ ಸಾವಯವ ಕೊಕೋಫಿಟ್‌ ಸಿದ್ಧವಾಗುತ್ತದೆ.

ADVERTISEMENT

‘ತೋಟಗಾರಿಕೆ ಬೆಳೆಗಳು, ತರಕಾರಿ ಬೆಳೆಗಳು ಹಾಗೂ ಟೆರೇಸ್‌ ಗಾರ್ಡನ್ ಮತ್ತು ನರ್ಸರಿಗಳಲ್ಲಿ ಕೊಕೊಪೀಟ್‌ ಗೊಬ್ಬರವನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದ್ದರಿಂದ ಈ ಗೊಬ್ಬರಕ್ಕೆ ಬಹು ಬೇಡಿಕೆಯಿದೆ. 34 ಕೆ.ಜಿ ಮೂಟೆಗೆ ₹300ರಿಂದ ₹350 ದರವಿದೆ. ಬೇಡಿಕೆಗೆ ಅನುಗುಣವಾಗಿ ಕೊಕೊಪೀಟ್‌ ಗೊಬ್ಬರವನ್ನು ತಯಾರಿಸಿ ಪೂರೈಸುತ್ತೇನೆ’ ಎಂದು ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಗೊಬ್ಬರವನ್ನು ಹೊರ ರಾಜ್ಯಗಳಿಗೆ ರಫ್ತು ಮಾಡುತ್ತಿದ್ದೇನೆ. ಜತೆಗೆ, ತರಕಾರಿ, ಸೊಪ್ಪು ಬೆಳೆಯುತ್ತಿದ್ದೇನೆ. ತಿಂಗಳಿಗೆ ಒಟ್ಟು ₹30 ಸಾವಿರ ಆದಾಯ ಗಳಿಸುತ್ತಿದ್ದೇನೆ’ ಎಂದು ಹೇಳಿದರು.

‘ಎರೆಹುಳು ಗೊಬ್ಬರ ಮತ್ತು ಜೀವಾಮೃತವನ್ನು ತಯಾರಿಸಲು ಒತ್ತು ನೀಡಿದ್ದೇನೆ’ ಎಂದರು.

ಶಿವಕುಮಾರ್‌ ಮೊ.ಸಂ. 9741060826.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.