
ಮೈಸೂರು: ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದ ಸರ್ವೆ ನಂ 390ರಿಂದ 430ರವರೆಗಿನ ಜಮೀನಿನ ನೈಜ ಫಲಾನುಭವಿಗಳಿಗೆ ಪರಿಹಾರ ಪಾವತಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಆರಂಭಿಸಿದ ಅನಿರ್ದಿಷ್ಟಾವಧಿ ಪ್ರತಿಭಟನೆ ಶುಕ್ರವಾರ ಅಂತ್ಯಗೊಂಡಿತು.
ಬೆಳಿಗ್ಗಿನಿಂದಲೇ ಪ್ರತಿಭಟನಕಾರರು ಸರ್ಕಾರ ಹಾಗೂ ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ) ವಿರುದ್ಧ ಧಿಕ್ಕಾರ ಕೂಗಿದರು. ಚಿತ್ರನಗರಿಗಾಗಿ ಭೂಮಿ ಕಳೆದುಕೊಂಡು ಅನ್ಯಾಯಕ್ಕೊಳಗಾದ ನೈಜ ರೈತರಿಗೆ ನ್ಯಾಯ ಒದಗಿಸಬೇಕು ಹಾಗೂ ಗಾಲ್ಫ್ ಕಂಪನಿಗೆ ಭೂಮಿ ಕಳೆದುಕೊಂಡ ಕೋಚನಹಳ್ಳಿ ರೈತರಿಗೆ ಉದ್ಯೋಗ ಮತ್ತು ನಿವೇಶನ ನೀಡುವಂತೆ ಆಗ್ರಹಿಸಿದರು.
ಸಂಜೆ ಎಡಿಸಿ ಪಿ.ಶಿವರಾಜು ಸ್ಥಳಕ್ಕೆ ಆಗಮಿಸಿ ಮಾತನಾಡಿ, ‘ನಿಜವಾಗಿ ಉಳುಮೆ ಮಾಡುತ್ತಿದ್ದ 673 ರೈತರ ಪಟ್ಟಿಗಳನ್ನು ಬುಧವಾರದಿಂದ ಪರಿಶೀಲನೆ ಮಾಡಿ ಒಂದು ತಿಂಗಳ ಅವಧಿ ಒಳಗೆ ಅವರಿಗೂ ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತೇವೆ’ ಎಂದು ಭರವಸೆ ನೀಡಿದರು.
ಬಳಿಕ ಚಳವಳಿಯನ್ನು ಶನಿವಾರದಿಂದ ಇಮ್ಮಾವು ಗ್ರಾಮದಲ್ಲಿ ಮುಂದುವರಿಸಲು ತೀರ್ಮಾನಿಸಿ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಂತ್ಯಗೊಳಿಸಲಾಯಿತು.
ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಮರಂಕಯ್ಯ, ಯುವ ಘಟಕದ ಅಧ್ಯಕ್ಷ ಪ್ರೇಮ್ರಾಜ್, ತಾಲೂಕು ಯುವ ಘಟಕದ ಅಧ್ಯಕ್ಷ ಮೈದನಹಳ್ಳಿ ಮಹೇಶ್ ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.