ಮೈಸೂರು: ‘ಸರ್ಕಾರದ ಮೌನದಿಂದಲೇ ವಿವಾದ, ಗೊಂದಲಗಳು ಬೆಳೆಯುತ್ತಿವೆ. ಮಧ್ಯಪ್ರವೇಶಿಸಿ ಸೌಹಾರ್ದ ವಾತಾವರಣ ಸ್ಥಾಪಿಸಬೇಕಿತ್ತು. ಆ ಕೆಲಸ ನಡೆಯುತ್ತಿಲ್ಲ. ಇದು ಪ್ರಗತಿಪರ ರಾಜ್ಯಕ್ಕೆ ಶೋಭೆ ತರುವುದಿಲ್ಲ’ ಎಮದು ತನ್ವೀರ್ ಸೇಠ್ ವಾಗ್ದಾಳಿ ನಡೆಸಿದರು.
‘ಪ್ರಚೋದನಕಾರಿ ಹೇಳಿಕೆ ನೀಡುವವರು ಹೆಚ್ಚಾಗಿದ್ದಾರೆ. ಗುಂಡಿಕ್ಕುತ್ತೇನೆ, ನಾಲಿಗೆ ಸೀಳುತ್ತೇನೆ ಎಂಬುವರನ್ನು ತಿದ್ದಲು ಆಗುವುದಿಲ್ಲ. ಸಂವಿಧಾನವು ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಸಮುದಾಯವನ್ನು ಗುರಿಯಾಗಿಸಿ ನೋಯಿಸುವುದು, ಕೆಣಕುವುದು ಸರಿಯಲ್ಲ. ಭಾರತಾಂಬೆ ಮಕ್ಕಳಾಗಿ ಸಂವಿಧಾನ ಪಾಲಿಸಬೇಕು’ ಎಂದು ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ತಿಳಿಸಿದರು.
‘ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಯ ಇತಿಹಾಸ, ಸತ್ಯ ಸಂಗತಿಯನ್ನು ಪುರಾತತ್ವ ಇಲಾಖೆಯೇ ಹೇಳಬೇಕು. ಈ ಕುರಿತು ಮಂಡ್ಯ ಜಿಲ್ಲಾಡಳಿತ, ವಕ್ಫ್ ಸಂಸ್ಥೆಯೊಂದಿಗೆ ಶೀಘ್ರದಲ್ಲೇ ಚರ್ಚೆ ನಡೆಸಲಿದ್ದೇನೆ. ಇಲಾಖೆಗೆ ಪತ್ರ ಬರೆದಿದ್ದೇನೆ. ವಿನಾಕಾರಣ ಗೊಂದಲ ಸೃಷ್ಟಿಸಿ ಜನರ ಭಾವನೆ ಕೆರಳಿಸುವುದು ನಾಗರಿಕತೆಯಲ್ಲ’ ಎಂದರು.
‘ಟಿಪ್ಪು ಅರಮನೆ ಮುಂಭಾಗದಲ್ಲೇ ರಂಗನಾಥಸ್ವಾಮಿ ದೇಗುಲ ಗಟ್ಟಿಯಾಗಿ ನಿಂತಿದೆ. ಟಿಪ್ಪು ಜೀರ್ಣೋದ್ಧಾರ ಮಾಡಿರುವುದಕ್ಕೆ ದಾಖಲೆಗಳಿವೆ. ಇತಿಹಾಸವನ್ನು ತಿರುಚುವುದಕ್ಕೆ ಸಾಧ್ಯವಾಗದು’ ಎಂದು ತಿಳಿಸಿದರು.
‘ಪಠ್ಯಪುಸ್ತಕ ಪರಿಷ್ಕರಣೆ ಮೂಲಕ1.20 ಕೋಟಿ ಮಕ್ಕಳನ್ನು ಗೊಂದಲಕ್ಕೀಡು ಮಾಡಲಾಗಿದೆ. ಬಸವಣ್ಣ, ಕುವೆಂಪು ಅವರನ್ನು ಅವಮಾನಿಸಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.