ಮೈಸೂರು: ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ, ಬನ್ನೂರು ಹೋಬಳಿ ತುರಗನೂರಿನಲ್ಲಿ ನಟಿ ಹಾಗೂ ಕಾಂಗ್ರೆಸ್ ಮುಖಂಡೆ ವಿದ್ಯಾ ಅವರನ್ನು ಆಕೆಯ ಪತಿ ನಂದೀಶ್ ಸೋಮವಾರ ತಡರಾತ್ರಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
‘ನಗರದ ಶ್ರೀರಾಂಪುರ ನಿವಾಸಿಯಾಗಿದ್ದ ವಿದ್ಯಾ ಅವರು ತಡರಾತ್ರಿ ತುರಗನೂರಿನಲ್ಲಿರುವ ಗಂಡನ ಮನೆಗೆ ತೆರಳಿದ್ದು, ಇಬ್ಬರ ನಡುವೆ ಜಗಳವಾಗಿತ್ತು. ಜಗಳದ ನಡುವೆ ಆರೋಪಿಯು ಪತ್ನಿಯ ತಲೆಗೆ ತಲವಾರಿನಿಂದ ಹಲ್ಲೆ ನಡೆಸಿದ್ದರಿಂದ ಆಕೆ ಮೃತಪಟ್ಟರು’ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ತಾಯಿಯ ಹೇಳಿಕೆ ಆಧರಿಸಿ ಬನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘2018ರಲ್ಲಿ ವಿದ್ಯಾ–ನಂದೀಶ್ ವಿವಾಹವಾಗಿದ್ದು, ಮೈಸೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇಬ್ಬರ ನಡುವೆ ಹಲವು ಬಾರಿ ಕೌಟುಂಬಿಕ ಕಲಹಗಳು ನಡೆದಿದ್ದು, ವಿಚ್ಛೇದನವನ್ನೂ ಪಡೆದಿದ್ದರು. ಎರಡು ವರ್ಷದ ಹಿಂದೆ ಮತ್ತೆ ಒಂದಾಗಿ, ಮದುವೆ ನೋಂದಣಿ ಮಾಡಿಸಿದ್ದರು. ಆದರೂ ಕಲಹ ನಿಂತಿರಲಿಲ್ಲ’ ಎಂದು ಮೂಲಗಳು ತಿಳಿಸಿವೆ.
ನಗರ ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವರು, ‘ಭಜರಂಗಿ’ ಮತ್ತು ‘ಮಾರುತಿ 800’ ಸಿನಿಮಾದಲ್ಲಿ ಸಹನಟಿಯಾಗಿ ಕಾಣಿಸಿಕೊಂಡಿದ್ದರು. ಅವರಿಗೆ ಇಬ್ಬರು ಪುತ್ರಿಯರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.