ADVERTISEMENT

ನಾನು, ಸಿದ್ದರಾಮಯ್ಯ ಸಾಮಾನ್ಯ ಕಾರ್ಯಕರ್ತರು: ಮಾಜಿ ಸಚಿವ ಎಚ್‌.ಸಿ ಮಹದೇವಪ್ಪ

ನಂಜನಗೂಡಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಡಾ.ಎಚ್‌.ಸಿ.ಮಹದೇವಪ್ಪ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 1:57 IST
Last Updated 9 ಜುಲೈ 2021, 1:57 IST
ನಂಜನಗೂಡಿನ ಕೆ.ಎಚ್.ಬಿ. ಕಾಲೊನಿಯ ಉದ್ಯಾನದಲ್ಲಿ ಗುರುವಾರ ನಡೆದ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಎಚ್.ಸಿ. ಮಹದೇವಪ್ಪ ಮಾತನಾಡಿದರು
ನಂಜನಗೂಡಿನ ಕೆ.ಎಚ್.ಬಿ. ಕಾಲೊನಿಯ ಉದ್ಯಾನದಲ್ಲಿ ಗುರುವಾರ ನಡೆದ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಎಚ್.ಸಿ. ಮಹದೇವಪ್ಪ ಮಾತನಾಡಿದರು   

ನಂಜನಗೂಡು: ‘ಆರ್‌.ಧ್ರುವನಾರಾಯಣ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಉನ್ನತ ಹುದ್ದೆಯಲ್ಲಿ ದ್ದಾರೆ. ನಾನು, ಸಿದ್ದರಾಮಯ್ಯ ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿದ್ದೇವೆ’ ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ವ್ಯಂಗ್ಯವಾಡಿದರು.

ನಗರದ ಕೆ.ಎಚ್.ಬಿ. ಕಾಲೊನಿಯ ಉದ್ಯಾನದಲ್ಲಿ ಗುರುವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಕಾಂಗ್ರೆಸ್ ಪಕ್ಷದ ಮುಂದಿಲ್ಲ. ಎರಡು ವರ್ಷ ಕಳೆದ ಮೇಲೆ ಚುನಾವಣೆ ನಡೆದ ಬಳಿಕ ಶಾಸಕರ ಅಭಿಪ್ರಾಯದಂತೆ ಪಕ್ಷದ ಹೈಕಮಾಂಡ್ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ. ಆದ್ದರಿಂದ ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ದುಡಿದು ಪಕ್ಷವನ್ನು ಅಧಿಕಾರಕ್ಕೆ ತರಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ರಾಜ್ಯದ 10ರಿಂದ 12 ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ನನಗೆ ಆಯಾ ಕ್ಷೇತ್ರದ ಮುಖಂಡರು ಆಹ್ವಾನ ನೀಡುತ್ತಿದ್ದಾರೆ. ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷೆ ಹೊಂದಿರುವ ಎಲ್ಲರಿಗೂ ಶುಭಾಶಯಗಳು. ಪಕ್ಷದ ನಾಯಕತ್ವ ಬಯಸಿದಂತೆ ನಾನು ನಡೆದು ಕೊಳ್ಳುತ್ತೇನೆ’ ಎಂದು ಹೇಳಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದಾಗ ರಾಜ್ಯದ ದೀನ ದಲಿತರು ಸೇರಿದಂತೆ ಎಲ್ಲ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಲಾಗಿತ್ತು. ಅವರ ಆಡಳಿತವನ್ನು ಜನ ಈಗಲೂ ನೆನಪಿಸಿಕೊಳ್ಳುತ್ತಿದ್ದಾರೆ. ಅವರ ಸಂಪುಟದಲ್ಲಿ ಲೋಕೋಪ ಯೋಗಿ ಸಚಿವನಾಗಿ, ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದೇನೆ’ ಎಂದು ಅವರು ತಿಳಿಸಿದರು.

ಮುಂದಿನ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಭಿನ್ನಾಭಿಪ್ರಾಯ ಮರೆತು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಸುನೀಲ್ ಬೋಸ್, ಇಂಧನ್ ಬಾಬು, ದೇವನೂರು ಮಹದೇವಪ್ಪ, ಕೆ.ಬಿ.ಸ್ವಾಮಿ, ಚಾಮರಾಜು, ಕೆಂಪಣ್ಣ, ಗೋವಿಂದ ರಾಜು, ತರಗನಹಳ್ಳಿ ನಂಜುಂಡಸ್ವಾಮಿ, ಮಂಜುನಾಥ್, ಶಿವನಾಗಪ್ಪ, ಚೆನ್ನನಾಯಕ, ಸೂರ್ಯಕುಮಾರ್, ಮರಿಸ್ವಾಮಿ, ಹೆಜ್ಜಿಗೆ ಕೃಷ್ಣ, ಅನಿಲ್, ಹಾಡ್ಯ ಜಯರಾಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.