ಮೈಸೂರು: ‘ಮಾರಕ ಕೊರೊನಾ ವೈರಸ್ ಬಂದ ಮೇಲೂ ನಾವು ಸಮರ್ಪಕವಾಗಿ ಕೈ ತೊಳೆಯುವುದನ್ನು ಕಲಿಯದಿದ್ದರೆ ಮುಂದಾಗುವ ಅನಾಹುತಗಳಿಗೆ ನಾವೇ ಜವಾಬ್ದಾರರಾಗಬೇಕಾಗುತ್ತದೆ’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಚಿದಂಬರ ಎಚ್ಚರಿಕೆ ನೀಡಿದರು.
ವಾರ್ತಾ ಮತ್ತು ಪ್ರಚಾರ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಗುರುವಾರ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಾಸ್ಕ್’ ಧರಿಸುವುದಕ್ಕಿಂತ ಪದೇ ಪದೇ ಸಾಬೂನಿನಿಂದ ಸಮರ್ಪಕವಾಗಿ ಕೈ ತೊಳೆಯುವುದರಿಂದ ಈ ರೋಗವನ್ನು ತಡೆಗಟ್ಟಬಹುದು. ನಮ್ಮ ಕೈ, ಮೂಗು, ಬಾಯಿಯನ್ನು ಮುಟ್ಟುಕೊಳ್ಳುವುದಕ್ಕೂ ಮುಂಚೆ ಕೈ ತೊಳೆದರೆ ಈ ಕಾಯಿಲೆ ಬರುವುದಿಲ್ಲ’ ಎಂದು ಅವರು ಹೇಳಿದರು.
ಕೆಮ್ಮು, ಶೀತ ಇರುವವರು ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರ ಹಿಡಿಯಬೇಕು. ಆ ಕರವಸ್ತ್ರವನ್ನು ದಿನಕ್ಕೆ ಒಮ್ಮೆ ಡಿಟರ್ಜೆಂಟ್ ಬಳಸಿ ತೊಳೆಯಬೇಕು. ಬೇರೆಯವರಿಂದ ಕನಿಷ್ಠ 2 ಮೀಟರ್ ಅಂತವನ್ನು ಕಾಯ್ದುಕೊಳ್ಳಬೇಕು ಎಂದು ಅವರು ಕಿವಿ ಮಾತು ಹೇಳಿದರು.
ಬೇರೆ ದೇಶದಿಂದ ಇಲ್ಲಿಗೆ ಬಂದವರಷ್ಟೇ ಪೀಡಿತರಾದರೆ ಅದು ಮೊದಲ ಹಂತ. ಇವರ ಕುಟುಂಬದವರು ನಿಕಟ ಸಂಪರ್ಕಕ್ಕೆ ಬಂದವರಿಗೆ ಬಂದರೆ ಅದು 2ನೇ ಹಂತ, ಸಾರ್ವಜನಿಕವಾಗಿ ಸಮುದಾಯದಲ್ಲಿ ಹರಡಿದರೆ 3ನೇ ಹಂತ, ನಿಯಂತ್ರಣಕ್ಕೆ ಬಾರದಿದ್ದರೆ ಅದು 4ನೇ ಹಂತ ಎಂದು ವಿಭಾಗಿಸಲಾಗಿದೆ. ಸದ್ಯ, ಭಾರತ 2ನೇ ಹಂತದಲ್ಲಿದೆ. 3ನೇ ಹಂತಕ್ಕೆ ಹೋಗದಂತೆ ತಡೆಯುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ವಿಶ್ವ ಆರೋಗ್ಯ ಸಂಸ್ಥೆಯ ವಿಭಾಗೀಯ ಸಮಾಲೋಚಕ ಡ.ಸುಧೀರ್ನಾಯಕ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯ ವೈದ್ಯಾಧಿಕಾರಿ ಡಾ.ಪ್ರಕಾಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.