ಪಿರಿಯಾಪಟ್ಟಣ: ಜ್ವರ, ಶೀತಕ್ಕೆ ಚಿಕಿತ್ಸೆಗೆಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬಂದ ಯುವಕನಿಗೆ, ಕೊರೊನಾ ಸೋಂಕಿನ ಶಂಕೆಯಿಂದ ತಪಾಸಣೆಗಾಗಿ ಶುಕ್ರವಾರ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕಳುಹಿಸಲಾಗಿದೆ.
ತಾಲ್ಲೂಕಿನ ಅಬ್ಬಳತಿ ಗ್ರಾಮದ ಯುವಕ ಕೇರಳದ ‘ಕಾಫಿ ಡೇ’ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಎರಡು ದಿನಗಳ ಹಿಂದೆ ತನ್ನ ಗ್ರಾಮಕ್ಕೆ ಬಂದಿದ್ದ.
ಜ್ವರ, ಕೆಮ್ಮಿನಿಂದ ಬಳಲುತ್ತಿದ್ದ ಯುವಕ ಶುಕ್ರವಾರ ತನ್ನ ಸ್ನೇಹಿತನೊಂದಿಗೆ ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದ. ವೈದ್ಯರು ವಿಚಾರಿಸಿದಾಗ ಕೇರಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವೆ ಎಂದು ತಿಳಿಸಿದ. ತಕ್ಷಣವೇ ಎಚ್ಚೆತ್ತುಕೊಂಡ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ, ಆತನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಆಂಬುಲೆನ್ಸ್ನಲ್ಲಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕಳುಹಿಸಿಕೊಟ್ಟರು.
ಚಿಕಿತ್ಸೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದ ಯುವಕ, ಕೇರಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ತಿಳಿಸಿದ್ದರಿಂದ ಗಾಬರಿಗೊಂಡ ಆಸ್ಪತ್ರೆಯ ಸಿಬ್ಬಂದಿಗಳು ಆತನಿಗೆ ಚಿಕಿತ್ಸೆ ನೀಡಲು ಹೆದರಿದ್ದಾರೆ. ಬಳಿಕ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶ್ರೀನಿವಾಸ್ ಮತ್ತು ಸಿಬ್ಬಂದಿ ತಮ್ಮ ಆಸ್ಪತ್ರೆಯ ಆಂಬುಲೆನ್ಸ್ನಲ್ಲೇ ವಿಶೇಷ ಸುರಕ್ಷಾ ಕ್ರಮಗಳೊಂದಿಗೆ ಮೈಸೂರಿಗೆ ಕಳುಹಿಸಿಕೊಟ್ಟಿದ್ದಾರೆ ಎಂಬುದು ತಿಳಿದು ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.