ಮೈಸೂರು: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಒಬ್ಬ ಸಿಬ್ಬಂದಿ ಮತ್ತು 6 ಮಂದಿ ಕೈದಿಗಳಿಗೆ ಕೊರೊನಾ ಸೋಂಕು ತಗುಲಿದ್ದು, ಆತಂಕ ಮೂಡಿಸಿದೆ. ಹೊರಗಡೆಯಿಂದ ಹೊಸದಾಗಿ ಬರುವ ಕೈದಿಗಳಿಂದಲೇ ಸೋಂಕು ಹರಡುತ್ತಿರುವುದು ಖಚಿತಗೊಂಡಿದೆ. ಹೀಗಾಗಿ, ಹೊಸ ಕೈದಿಗಳಿಗಾಗಿ ಜೈಲಿಂದ ಹೊರಗಡೆ ಪ್ರತ್ಯೇಕ ಕಟ್ಟಡ ಗುರುತಿಸಿಕೊಡುವಂತೆ ಕಾರಾಗೃಹದ ಮುಖ್ಯ ಅಧೀಕ್ಷಕಿ ಕೆ.ಸಿ.ದಿವ್ಯಶ್ರೀ ಅವರು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಅವರಿಗೆ ಮನವಿ ಮಾಡಿದ್ದಾರೆ.
ಈಚೆಗಷ್ಟೇ ಪ್ರಕರಣವೊಂದರಲ್ಲಿ ಬಂಧಿತನಾದ ಕೈದಿಯೊಬ್ಬ ಜೈಲಿಗೆ ಬಂದ ಎರಡೇ ಗಂಟೆಯಲ್ಲಿ ಕೊರೊನಾ ಸೋಂಕಿತ ಎಂಬ ವರದಿ ಬಂದಿತು. ಅಷ್ಟರಲ್ಲಿ ಹಲವು ಮಂದಿ ಕ್ವಾರಂಟೈನ್ ಆಗಬೇಕಾಯಿತು. ಕನಿಷ್ಠ ಎಂದರೂ ವಾರಕ್ಕೆ 7ರಿಂದ 8 ಮಂದಿ ಕೈದಿಗಳು ಜೈಲಿಗೆ ಬರುತ್ತಾರೆ. ಇದು ಇನ್ನಷ್ಟು ಭೀತಿಗೆ ಕಾರಣವಾಯಿತು.
ಹೊಸ ಕೈದಿಗಳಿಗೆ ಹಾಗೂ ಪೆರೊಲ್ ಮೇಲೆ ಹೊರಗಡೆ ಹೋಗಿ ಮತ್ತೆ ಬರುವ ಕೈದಿಗಳನ್ನು ಜೈಲಿಂದ ಹೊರಗಡೆ ಕಟ್ಟಡವೊಂದರಲ್ಲಿ ಇರಿಸಿ, ವರದಿ ಬಂದ ಬಳಿಕ ಅವರಿಗೆ ಜೈಲಿಗೆ ಪ್ರವೇಶ ನೀಡಲು ಚಿಂತಿಸಲಾಗಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಕಾರಾಗೃಹದ ಮುಖ್ಯ ಅಧೀಕ್ಷಕಿ ಕೆ.ಸಿ.ದಿವ್ಯಶ್ರೀ, ‘ಇತ್ತೀಚೆಗೆ ಹೊಸದಾಗಿ ಜೈಲಿಗೆ ಬರುವ ಕೈದಿಗಳ ಸಂಖ್ಯೆ ಹೆಚ್ಚುತ್ತಿದೆ. ಜೈಲಿನ ಒಳಗೆ ಪ್ರತ್ಯೇಕ ಕೋಣೆಯಲ್ಲಿ ಅವರನ್ನು ಇರಿಸುವುದು ಕಷ್ಟವಾಗುತ್ತಿದೆ. ಹೊರಗಡೆ ಇರಿಸಿ, ಕೊರೊನಾ ಪರೀಕ್ಷಾ ವರದಿ ಬಂದ ಬಳಿಕ ಅವರನ್ನು ಜೈಲಿನ ಒಳಗೆ ಬಿಡಬಹುದು. ಹಾಗಾಗಿ ಮನವಿ ಸಲ್ಲಿಸಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.