ADVERTISEMENT

ಒಂದೇ ದಿನ ಅತ್ಯಧಿಕ ಸೋಂಕು

ಜಿಲ್ಲೆಯಲ್ಲಿ 14ಕ್ಕೇರಿದ ಕೋವಿಡ್‌ ಸಾವಿನ ಸಂಖ್ಯೆ: ಇದುವರೆಗೆ 24,571 ಮಂದಿಗೆ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 8:53 IST
Last Updated 9 ಜುಲೈ 2020, 8:53 IST
ಮೈಸೂರಿನ ಜಿಲ್ಲಾ ನ್ಯಾಯಾಲಯದ ಗೇಟ್‌ ಮುಚ್ಚಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು
ಮೈಸೂರಿನ ಜಿಲ್ಲಾ ನ್ಯಾಯಾಲಯದ ಗೇಟ್‌ ಮುಚ್ಚಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು   

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕೋವಿಡ್‌–19ನಿಂದ ಮತ್ತೆರಡು ಸಾವು ಸಂಭವಿಸಿದ್ದು, ಮೃತರ ಒಟ್ಟು ಸಂಖ್ಯೆ 14ಕ್ಕೆ ಏರಿದೆ.

ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಕಲ್ಯಾಣಗಿರಿಯ 48 ವರ್ಷ ವಯಸ್ಸಿನ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಅವರು ಇತರ ಕಾಯಿಲೆಗಳಿಂದಲೂ ಬಳಲುತ್ತಿದ್ದರು ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ತಿಳಿಸಿದ್ದಾರೆ.

ಅಲ್ಲದೇ, ಬುಧವಾರ 59 ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಇದು ಜಿಲ್ಲೆಯಲ್ಲಿ ಇದುವರೆಗೆ ಒಂದೇ ದಿನ ಪತ್ತೆಯಾದ ಅತ್ಯಧಿಕ ಸಂಖ್ಯೆ ಆಗಿದೆ. ಈ ಹಿಂದೆ 51 ಪ್ರಕರಣಗಳು (ಜುಲೈ 1) ಒಂದೇ ದಿನ ವರದಿ ಆಗಿದ್ದವು.

ADVERTISEMENT

ಇದುವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 589ಕ್ಕೇರಿದ್ದು, 18 ಮಂದಿ ಚೇತರಿಸಿಕೊಂಡಿದ್ದಾರೆ.

ಒಬ್ಬ ಗರ್ಭಿಣಿ, ಒಬ್ಬ ಬಾಣಂತಿ, ಮೂವರು ಪೊಲೀಸರು, ನಾಲ್ವರು ಆರೋಗ್ಯ ಕಾರ್ಯಕರ್ತರು, 23 ಮಂದಿ ಪ್ರಾಥಮಿಕ ಸಂಪರ್ಕಿತರು, ತೀವ್ರ ಉಸಿರಾಟ ಸಮಸ್ಯೆಯಿಂದ (ಎಸ್‌ಎಆರ್‌ಐ) ಬಳಲುತ್ತಿದ್ದ 4 ಮಂದಿ, ಶೀತ ಜ್ವರ ಮಾದರಿಯ ಅನಾರೋಗ್ಯ ಲಕ್ಷಣದಿಂದ (ಐಎಲ್‌ಐ) ಬಳಲುತ್ತಿದ್ದ 15 ಮಂದಿ, ಅಂತರರಾಜ್ಯ ಹಾಗೂ ಬೇರೆ ಜಿಲ್ಲೆಯಿಂದ ಬಂದ 8 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಜಿಲ್ಲೆಯಲ್ಲಿ 2,389 ಮಂದಿಯನ್ನು 14 ದಿನಗಳ ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಇದುವರೆಗೆ ಒಟ್ಟು 24,571 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಏರಿಕೆ: ಜಿಲ್ಲೆಯಲ್ಲಿನ ಕಂಟೈನ್‌ಮೆಂಟ್‌ ವಲಯಗಳ ಸಂಖ್ಯೆಯೂ ಏರಿಕೆ ಆಗಿದೆ. ಬುಧವಾರ 37 ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

ಅಂಕಿ ಅಂಶ

589-ಜಿಲ್ಲೆಯಲ್ಲಿ ಒಟ್ಟು ಕೋವಿಡ್‌ ಪ್ರಕರಣ

322-ಇದುವರೆಗೆ ಗುಣಮುಖರಾದವರು

253-ಸಕ್ರಿಯ ಪ್ರಕರಣಗಳು

14-ಜಿಲ್ಲೆಯಲ್ಲಿ ಇದುವರೆಗೆ ಮೃತಪಟ್ಟವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.