ADVERTISEMENT

ಹಣ ಪಡೆದು ಕೋವಿಡ್ ಲಸಿಕೆ; ಪುಷ್ಪಾ ಅಮರ್‌ನಾಥ್ ಕಿಡಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 13:11 IST
Last Updated 23 ಏಪ್ರಿಲ್ 2021, 13:11 IST
ಪುಷ್ಪಾ ಅಮರನಾಥ್
ಪುಷ್ಪಾ ಅಮರನಾಥ್   

ಮೈಸೂರು: ಸಾರ್ವಜನಿಕರಿಂದ ಹಣ ಪಡೆದು ಕೋವಿಡ್ ಲಸಿಕೆ ಹಾಕುವ ಮೂಲಕ ಸರ್ಕಾರ ಹಗಲು ದರೋಡೆಗೆ ಇಳಿದಿದೆ ಎಂದು ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪಾ ಅಮರನಾಥ್ ಕಿಡಿಕಾರಿದರು.

‌ಎಲ್ಲ ಸಾರ್ವಜನಿಕರಿಗೂ ಉಚಿತವಾಗಿ ಲಸಿಕೆ ನೀಡಬೇಕಿತ್ತು. ವಿದೇಶಗಳಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಿ, ನಮ್ಮ ದೇಶದ ಜನರಿಂದ ಹಣ ಪಡೆದು ಕೋವಿಡ್ ಲಸಿಕೆ ಹಾಕಲಾಗುತ್ತಿದೆ. ಇದರಲ್ಲೂ ‘ಕಿಕ್‌ಬ್ಯಾಗ್’ ಪಡೆದಿರಬಹುದೇನೋ ಎಂಬ ಸಂದೇಹ ಬರುತ್ತಿದೆ ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅನುಮಾನ ವ್ಯಕ್ತಪಡಿಸಿದರು.

ಮಾಸ್ಕ್‌ನಿಂದ ಹಿಡಿದು ಕೋವಿಡ್ ಲಸಿಕೆ, ಆಕ್ಸಿಜನ್‌ವರೆಗೂ ಎಲ್ಲದ್ದಕ್ಕೂ ಸರ್ಕಾರ ಜಿಎಸ್‌ಟಿ ಹಾಕಿದೆ. ಕನಿಷ್ಠ ಸೋಪು, ಸ್ಯಾನಿಟೈಸರ್‌, ಮಾಸ್ಕ್‌ನ್ನಾದರೂ ಜಿಎಸ್‌ಟಿಯಿಂದ ಹೊರಗಿಡಬೇಕಿತ್ತು. ಇವುಗಳನ್ನು ಪಡಿತರ ವ್ಯವಸ್ಥೆಯಡಿ ಪೂರೈಕೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.‌

ADVERTISEMENT

‘ನಮ್ಮ ಆರೋಗ್ಯ ಸಚಿವರು ನಿಜಕ್ಕೂ ಅನಾರೋಗ್ಯ ಸಚಿವರು. ‘ಊರು ಕೊಳ್ಳೆ ಹೊಡೆದ ಮೇಲೆ ಬಾಗಿಲು ಹಾಕಿದಂತೆ’ ಈಗ ಲಾಕ್‌ಡೌನ್ ಮಾಡಲು ಹೊರಟಿದ್ದಾರೆ. ಕೊರೊನಾ 2ನೇ ಅಲೆ ಕುರಿತು ತಜ್ಞರ ಸಮಿತಿ ನೀಡಿದ್ದ ವರದಿಯನ್ನು ಅಲಕ್ಷಿಸಿ ಉಪಚುನಾವಣೆಗಳಲ್ಲಿ ತೊಡಗಿಸಿಕೊಂಡರು. ಕೊರೊನಾ ಉಲ್ಬಣಗೊಳ್ಳಲು ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರೇ ಕಾರಣ’ ಎಂದು ಆರೋಪಿಸಿದರು.

ಈಗ ಸರ್ಕಾರ ಕೈಗೊಂಡಿರುವ ಕ್ರಮವು ಕೊರೊನಾದಿಂದ ಜನರು ಸಾಯುವುದರ ಜತೆಗೆ ಹಸಿವಿನಿಂದಲೂ ಸಾಯುವಂತೆ ಮಾಡಿದೆ. ಕಠಿಣ ನಿರ್ಬಂಧಗಳನ್ನು ಜಾರಿಗೆ ತರುವ ಮೊದಲು ಕನಿಷ್ಠ ಪೂರ್ವಸಿದ್ಧತೆಗಳನ್ನೂ ಮಾಡಿಕೊಂಡಿಲ್ಲ. ಇದೊಂದು ಹುಚ್ಚುತನದ ಸರ್ಕಾರ ಎಂದು ಹರಿಹಾಯ್ದರು.

ತಾಳಿಯನ್ನು ಅಡವಿಟ್ಟು ಶವಸಂಸ್ಕಾರ ಮಾಡುವಂತಹ ಸ್ಥಿತಿಗೆ ಭಾರತ ಮುಟ್ಟಿದೆ. ಕೊರೊನಾದಿಂದ ಜನರನ್ನು ಬದುಕಿಸಲಾಗದ ಸರ್ಕಾರ ಕನಿಷ್ಠ ಅವರ ಶವಗಳನ್ನಾದರೂ ಗೌರವಯುತವಾಗಿ ಸಂಸ್ಕಾರ ಮಾಡುವುದಕ್ಕೆ ಬೇಕಾದ ಸಿದ್ಧತೆಗಳನ್ನು ಕೈಗೊಳ್ಳಬೇಕು. ‘ಸಾವಿನ ಮನೆಯಲ್ಲೂ ಗಳ ಇರಿಯುವ’ವುದಕ್ಕೆ ಅವಕಾಶ ಮಾಡಿಕೊಡದೇ, ಹಣ ವಸೂಲಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.