ADVERTISEMENT

ಕೆನಡಾದಲ್ಲಿ ಕೆಲಸ ಕೊಡಿಸುವ ಆಮಿಷ; ವಂಚನೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 9:51 IST
Last Updated 2 ಏಪ್ರಿಲ್ 2019, 9:51 IST

ಮೈಸೂರು: ಕೆನಡಾದಲ್ಲಿ ಉದ್ಯೋಗ ಕೊಡಿಸುವ ಆಮಿಷ ಒಡ್ಡಿದ ಡಾ.ಹಿರೇಮಠ್ (45) ಅವರು ಸುಮಾರು 20ಕ್ಕೂ ಹೆಚ್ಚು ಜನರಿಂದ ಲಕ್ಷಾಂತರ ಹಣ ಪಡೆದು ವಂಚಿಸಿದ್ದಾರೆ ಎಂಬ ದೂರು ಇಲ್ಲಿನ ವಿದ್ಯಾರಣ್ಯಪುರಂ ಠಾಣೆಯಲ್ಲಿ ದಾಖಲಾಗಿದೆ.

ಆರೋ‍ಪಿಯು ವಿವಿಧ ಪತ್ರಿಕೆಗಳಲ್ಲಿ ‘ವಿದೇಶದಲ್ಲಿ ಉದ್ಯೋಗವಕಾಶ’ ಎಂಬ ಜಾಹೀರಾತು ನೀಡಿದ್ದಾನೆ. ಇದನ್ನು ನಂಬಿ ಬಂದ ಸುಮಾರು 20ಕ್ಕೂ ಹೆಚ್ಚು ಜನರಿಗೆ ಕೆನಡಾದಲ್ಲಿ ಒಳ್ಳೆಯ ಉದ್ಯೋಗಾವಕಾಶಗಳಿವೆ. ಆದರೆ, ಅದಕ್ಕೆ ₹ 50ರಿಂದ ₹ 1.5 ಲಕ್ಷ ವೆಚ್ಚವಾಗಲಿದೆ ಎಂದು ಹೇಳಿ ಹಣ ಪಡೆದಿದ್ದಾನೆ. ಪಾಸಪೋರ್ಟ್‌ ಪರಿಶೀಲನೆ ಎಂದು ಮೊಹಾಲಿಗೆ ಕರೆದುಕೊಂಡು ಹೋಗಿ ಅಲ್ಲೂ ಏಜೆನ್ಸಿಯೊಂದು ಇವರಿಂದ ಪಾಸಪೋರ್ಟ್‌ ಪಡೆದುಕೊಂಡಿದೆ.‌

ಇದರಿಂದಾಗಿ ಆರೋಪಿಯನ್ನು ಸಂಪೂರ್ಣವಾಗಿ ನಂಬಿದ ಅಭ್ಯರ್ಥಿಗಳು ಸಂಪೂರ್ಣ ಹಣ ನೀಡಿದ್ದಾರೆ. ಹಣ ಪಡೆದ ನಂತರ ಕೆಲವು ದಿನಗಳಿಂದ ಆರೋಪಿ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಅಕ್ರಮ ಮರಳುಗಾರಿಕೆ ವಿರುದ್ಧ ಪೊಲೀಸರ ದಾಳಿ

ತಿ.ನರಸೀಪುರ ತಾಲ್ಲೂಕಿನ ವಿವಿಧೆಡೆ ದಾಳಿ ನಡೆಸಿರುವ ಪೊಲೀಸರು ಅಕ್ರಮ ಮರಳುಗಾರಿಕೆಯ 2 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಕೆಂಡನಕೊಪ್ಪಲು ಗ್ರಾಮದ ಬಳಿ ಹರಿಯುವ ಕಾವೇರಿ ನದಿಯಲ್ಲಿ ರಾಜು, ಕುಮಾರ ಮತ್ತು ಶೀನ ಎಂಬುವವರು ಯಾವುದೇ ರಹದಾರಿ ಪಡೆಯದೇ ಮರಳು ತೆಗೆಯುತ್ತಿದ್ದರು. ಯಡತೊರೆ ಗ್ರಾಮ ಬಳಿ ಹರಿಯುವ ಕಾವೇರಿ ನದಿಯಲ್ಲಿ ದೊರೆ, ತೇಜು ಮತ್ತು ರಾಜು ಎಂಬುವವರು ಮರಳು ತೆಗೆಯುತ್ತಿದ್ದರು. ಇವರ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ತಿ.ನರಸೀಪುರ ಠಾಣೆಯಲ್ಲಿ ದಾಖಲಾಗಿದೆ.

ಬೈಕ್ ಡಿಕ್ಕಿ; ಪಾದಚಾರಿ ಸಾವು

ಮೈಸೂರಿನ ಕೋಳಗಾಲ ಗ್ರಾಮದಲ್ಲಿ ನಡೆದುಕೊಂಡು ಹೋಗುತ್ತಿದ್ದ ಚಿಕ್ಕನಾಯಕ ಎಂಬುವವರಿಗೆ ಅದೇ ಗ್ರಾಮದ ಕುಮಾರ್ ಎಂಬಾತ ಬೈಕ್‌ನಲ್ಲಿ ಡಿಕ್ಕಿ ಹೊಡೆದಿದ್ದರಿಂದ ಚಿಕ್ಕನಾಯಕ ಗಂಭೀರವಾಗಿ ಗಾಯಗೊಂಡರು. ನಂತರ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಎಚ್.ಡಿ.ಕೋಟೆ ಠಾಣೆಯಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.