ಮೈಸೂರು:ಕೋವಿಡ್–19 ಪರಿಸ್ಥಿತಿಯಲ್ಲಿ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಕಡ್ಡಾಯವೆಂದು ಸರ್ಕಾರ ಹೇಳುತ್ತಿದ್ದರೂ, ದಸರಾ ಗಜಪಡೆ ಸ್ವಾಗತದ ವೇಳೆ ಶುಕ್ರವಾರಮೈಸೂರು ಅರಮನೆ ಆವರಣ ಸಂಪೂರ್ಣ ಜನಮಯವಾಗಿತ್ತು. ಜಾತ್ರೆಯ ವಾತಾವರಣ ಸೃಷ್ಟಿಯಾಗಿತ್ತು.
ಅಂತರ ಕಾಯ್ದುಕೊಳ್ಳುವ ವಿಚಾರ ಬಹಳ ದೂರವೇ ಉಳಿದಿತ್ತು. ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಗಜಪಡೆಸಿಬ್ಬಂದಿ, ಪೊಲೀಸರು, ಅರ್ಚಕರು ಹಾಗೂ ಇತರ ಸಿಬ್ಬಂದಿ ಜೊತೆಜೊತೆಯಲ್ಲೇ ನಿಂತು ಕಾರ್ಯಕ್ರಮ ನಿರ್ವಹಿಸಿದರು. ಆನೆಗಳಿಗೆ ಪುಷ್ಪಾರ್ಚನೆಮಾಡಲು ಪೈಪೋಟಿ ಏರ್ಪಟ್ಟಿತು. ಆವರಣದಲ್ಲಿ 500ಕ್ಕೂ ಅಧಿಕ ಮಂದಿಸೇರಿದ್ದರು.
‘ಸೋಂಕು ಹೆಚ್ಚುತ್ತಿರುವ ಕಾರಣ ಈ ಬಾರಿ ಸರಳವಾಗಿ ದಸರಾ ಆಚರಿಸಲು ಸರ್ಕಾರ ನಿರ್ಧಾರ ಕೈಗೊಂಡು ಕೇವಲ ಐದು ಆನೆ ಕರೆತಂದಿದ್ದರೂ ಇಲ್ಲಿ ಮಾತ್ರ ಯಾವುದೇ ಮುನ್ನೆಚ್ಚರಿಕೆ ಕ್ರಮ ಅನುಸರಿಸಿಲ್ಲ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಎಸ್.ಟಿ.ಸೋಮಶೇಖರ್, ‘ಗಾಂಧಿ ಜಯಂತಿ ರಜೆ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ನಾವು ಕೇವಲ 75 ಮಂದಿಗೆ ಆಹ್ವಾನ ನೀಡಿದ್ದೆವು. ಈಗ ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ. ಮುನ್ನೆಚ್ಚರಿಕೆ ಕೈಗೊಂಡು ದಸರಾ ಕಾರ್ಯಕ್ರಮ ನಡೆಸುತ್ತೇವೆ. ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.