ADVERTISEMENT

ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನ ನಾಡಹಬ್ಬವಾಗಲಿ: ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 7:23 IST
Last Updated 22 ಜೂನ್ 2022, 7:23 IST
ಮೈಸೂರಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ಅನ್ವೇಷಣಾ ಸೇವಾಟ್ರಸ್ಟ್ ಬುಧವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 40ನೇ ಪುಣ್ಯ ಸ್ಮರಣೆಯಲ್ಲಿ ಎಸ್.ಎನ್.ಸತ್ಯಪ್ರಕಾಶ್ ಅರಸ್, ವಿದುಷಿ ಡಾ.ವಿ‌.ಮಾಲಿನಿ, ಲೇಖಕ ಪ್ರೊ. ಮೊರಬದ ಮಲ್ಲಿಕಾರ್ಜುನ, ಟಿ.ಪ್ರಭಾಕರ ಶೆಟ್ಟಿ, ಉದ್ಯಮಿ ಕೊಳ್ಕೆಬೈಲ್ ಗಣೇಶ್ ನಾರಾಯಣ ಹೆಗ್ಡೆ,  ಜಯದೇವರಾಜೇ ಅರಸ್,  ಅವರಿಗೆ 'ಧ್ವನಿಕೊಟ್ಟ ಧಣಿ' ಪ್ರಶಸ್ತಿ ಪ್ರದಾನ ಮಾಡಲಾಯಿತು
ಮೈಸೂರಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ಅನ್ವೇಷಣಾ ಸೇವಾಟ್ರಸ್ಟ್ ಬುಧವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 40ನೇ ಪುಣ್ಯ ಸ್ಮರಣೆಯಲ್ಲಿ ಎಸ್.ಎನ್.ಸತ್ಯಪ್ರಕಾಶ್ ಅರಸ್, ವಿದುಷಿ ಡಾ.ವಿ‌.ಮಾಲಿನಿ, ಲೇಖಕ ಪ್ರೊ. ಮೊರಬದ ಮಲ್ಲಿಕಾರ್ಜುನ, ಟಿ.ಪ್ರಭಾಕರ ಶೆಟ್ಟಿ, ಉದ್ಯಮಿ ಕೊಳ್ಕೆಬೈಲ್ ಗಣೇಶ್ ನಾರಾಯಣ ಹೆಗ್ಡೆ, ಜಯದೇವರಾಜೇ ಅರಸ್, ಅವರಿಗೆ 'ಧ್ವನಿಕೊಟ್ಟ ಧಣಿ' ಪ್ರಶಸ್ತಿ ಪ್ರದಾನ ಮಾಡಲಾಯಿತು   

ಮೈಸೂರು: 'ನಾಲ್ವಡಿ ಕೃಷ್ಣರಾಜ ಒಡೆಯರ್, ಡಿ.ದೇವರಾಜ ಅರಸು ರಾಜ್ಯದ ಜನರಿಗೆ ದನಿಯಾದರು. ದಲಿತರು- ಹಿಂದುಳಿದವರ ಏಳಿಗೆಗೆ ಶ್ರಮಿಸಿದರು' ಎಂದು ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು.‌

ನಗರದ ಎಂಜಿನಿಯರುಗಳ ಸಂಸ್ಥೆಯಲ್ಲಿ ಅನ್ವೇಷಣಾ ಸೇವಾಟ್ರಸ್ಟ್ ಬುಧವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 40ನೇ ಪುಣ್ಯ ಸ್ಮರಣೆಯಲ್ಲಿ 'ಕರ್ನಾಟಕ ಧ್ರುವತಾರೆ' ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

'ಆಧುನಿಕ ಕರ್ನಾಟಕ ನಿರ್ಮಾಣದಲ್ಲಿ ಇಬ್ಬರೂ ನಿರಂತರ ದುಡಿದರು. ಎಲ್ಲ ಕ್ಷೇತ್ರಗಳಲ್ಲೂ ರಾಜ್ಯದ ಸಾಧನೆಗೆ ಅಡಿಪಾಯ ಹಾಕಿಕೊಟ್ಟರು' ಎಂದು ಅಭಿಪ್ರಾಯ ಪಟ್ಟರು.

ADVERTISEMENT

'ದೀನ- ದಲಿತರ ಆಶಾಕಿರಣವಾಗಿದ್ದ ನಾಲ್ವಡಿ ಅವರ ಜನ್ಮದಿನವನ್ನು ನಾಡಹಬ್ಬವಾಗಿ ಸರ್ಕಾರವು ಆಚರಿಸಬೇಕು' ಎಂದು ಒತ್ತಾಯಿಸಿದರು.

'ದೇವರಾಜ ಅರಸು ರಾಜ್ಯದಲ್ಲಿ ಜೀತ ಪದ್ಧತಿ ನಿರ್ಮೂಲನೆಗೊಳಿಸಿದ್ದಲ್ಲದೆ, ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿಗೊಳಿಸಿ ನೊಂದವರಿಗೆ ಮಿಡಿದರು. ಈ ನೆಲದ ಕಾನೂನುಗಳು ರಾಷ್ಟ್ರದಲ್ಲೂ ಜಾರಿಗೊಳ್ಳಲು ಮೇಲ್ಪಂಕ್ತಿ ಹಾಕಿಕೊಟ್ಟರು' ಎಂದರು.

'ಮೈಸೂರು ನಗರದಲ್ಲಿ ಅರಸು ಪ್ರತಿಮೆ ಸ್ಥಾಪಿಸುವ ಸಂಬಂಧ ಹಲವು ವರ್ಷಗಳಿಂದ ಹೋರಾಟ ನಡೆದಿದೆ. ಈ ಕುರಿತು ಅಧಿವೇಶನದಲ್ಲಿ ಪ್ರಸ್ತಾವ ಸಲ್ಲಿಸಲಾಗುವುದು. ನಗರದ ಮುಖ್ಯಭಾಗದಲ್ಲಿ ಸ್ಥಾಪಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು' ಎಂದು ಭರವಸೆ ನೀಡಿದರು‌.

'ರಾಜ್ಯವನ್ನು ಹಲವರು ಮುನ್ನಡೆಸಿದ್ದಾರೆ. ಆದರೆ, ದನಿ ಇಲ್ಲದವರಿಗೆ ದನಿ ಕೊಟ್ಟಿದ್ದು ದೇವರಾಜ ಅರಸು ಮಾತ್ರ. ವಿವಿಧ ಸಮುದಾಯಗಳು ಮೀಸಲಾತಿಗೆ ಹಕ್ಕೋತ್ತಾಯವನ್ನು ಮಂಡಿಸುತ್ತಿರುವಾಗ ಅಲ್ಪಸಂಖ್ಯಾತ
ಅರಸು ಸಮುದಾಯವು ಹೋರಾಡಬೇಕು' ಎಂದು ಸಲಹೆ ನೀಡಿದರು.

ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಮಾತನಾಡಿದರು.

ಲೇಖಕ ಪ್ರೊ. ಮೊರಬದ ಮಲ್ಲಿಕಾರ್ಜುನ, ಟಿ.ಪ್ರಭಾಕರ ಶೆಟ್ಟಿ, ಜಯದೇವರಾಜೇ ಅರಸ್, ಉದ್ಯಮಿ ಕೊಳ್ಕೆಬೈಲ್ ಗಣೇಶ್ ನಾರಾಯಣ ಹೆಗ್ಡೆ, ವಿದುಷಿ ಡಾ.ವಿ‌.ಮಾಲಿನಿ, ಎಸ್.ಎನ್.ಸತ್ಯಪ್ರಕಾಶ್ ಅರಸ್ ಅವರಿಗೆ 'ಧ್ವನಿಕೊಟ್ಟ ಧಣಿ' ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕೃತಿಯ ಲೇಖಕ ಜಗನ್ನಾಥ ಶೆಟ್ಟಿ, ಅಖಿಲ ಕರ್ನಾಟಲ ಕರಾವಳಿ ಒಕ್ಕೂಟದ ಅಧ್ಯಕ್ಷ ಡಾ. ಎಸ್. ಶ್ರೀನಿವಾಸ ಶೆಟ್ಟಿ, ತವರು ಅರಸು ಮಹಿಳಾ ಸಮಾಜದ ಅಧ್ಯಕ್ಷೆ ವಿಜಯಲಕ್ಷ್ಮಿ ಅರಸ್, ಅನ್ವೇಷಣಾ ಟ್ರಸ್ಟ್ ಅಧ್ಯಕ್ಷ ಅಮರ್‌ನಾಥರಾಜೇ ಅರಸ್, ಅರಸು ಸಂಘದ ಅಧ್ಯಕ್ಷ ಎಚ್.ಎಂ.ಟಿ.ಲಿಂಗರಾಜೇ ಅರಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.