ಬೆಟ್ಟದಪುರ: ‘ರೈತರಿಂದ ಗುಣಮಟ್ಟದ ಹಾಲನ್ನು ಖರೀದಿಸಿ, ಅದಕ್ಕೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರ ಮತ್ತು ಪ್ರೋತ್ಸಾಹಧನವನ್ನು ನಮ್ಮ ಒಕ್ಕೂಟದಿಂದ ನೀಡಲಾಗುತ್ತದೆ’ ಎಂದು ಮೈಮುಲ್ ನ ಸಹಾಯಕ ವ್ಯವಸ್ಥಾಪಕ ಡಾ. ಸತೀಶ್ ತಿಳಿಸಿದರು.
ಸಮೀಪದ ಬಾರಸೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ‘ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಪಶುಆಹಾರವನ್ನು ಒಕ್ಕೂಟದ ವತಿಯಿಂದ ನೀಡಲಾಗುತ್ತದೆ. ಅಲ್ಲದೆ, ಪಶುಗಳಿಗೆ ಅಗತ್ಯವಿರುವ ಔಷಧಗಳನ್ನು ಮತ್ತು ವೈದ್ಯಕೀಯ ಸೇವೆಗಳನ್ನು ಕೂಡ ಒದಗಿಸಲಾಗುತ್ತದೆ. ಒಕ್ಕೂಟದಿಂದ ನೀಡುವ ಮಾರ್ಗದರ್ಶನದಲ್ಲಿ ಹಸು ಮತ್ತು ಕರುಗಳನ್ನು ಬೆಳೆಸಿದರೆ ರೈತರು ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ. ಇದನ್ನು ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.
ಸಂಘದ ಅಧ್ಯಕ್ಷ ಟಿ.ಕೆ ಮಲ್ಲರಾಜೇಅರಸ್ ಮಾತನಾಡಿ, ‘ಈ ಬಾರಿ ಉತ್ತಮ ಹಾಲು ಪೂರೈಕೆ ಮಾಡಿರುವುದರಿಂದ ಸಂಘಕ್ಕೆ ₹6 ಲಕ್ಷ ನಿವ್ವಳ ಲಾಭ ಗಳಿಸಿದೆ. ಮುಂದೆ ಇದೇ ರೀತಿ ಗುಣಮಟ್ಟದ ಹಾಲು ಸರಬರಾಜು ಮಾಡಿದರೆ ಈ ಗ್ರಾಮಕ್ಕೆ ಬಿ.ಎಂ.ಸಿ ಕೇಂದ್ರವನ್ನು ತರಲು ಸಹಾಯಕವಾಗುತ್ತದೆ’ ಎಂದರು.
ವಿಸ್ತರಣಾಧಿಕಾರಿ ಶ್ರೀಕಾಂತ್ ಮಾತನಾಡಿದರು. ಇದೇ ವೇಳೆ ಸಂಘಕ್ಕೆ ಗುಣಮಟ್ಟದ ಹಾಲು, ಸರಬರಾಜು ಮಾಡಿದ ಮೂರು ರೈತರನ್ನು ಹಾಗೂ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಸುರೇಶ್, ನಿರ್ದೇಶಕರಾದ ಚಿಕ್ಕದೇವರಾಜೇ ಅರಸ್, ದೇವರಾಜೇಅರಸ್, ಗೋಪಾಲರಾಜೇಅರಸ್, ಜಯಚಂದ್ರರಾಜೇ ಅರಸ್, ಮುಕುಂದರಾಜೇಅರಸ್, ಚಂದ್ರಯ್ಯ, ಚಂದ್ರಕಾಂತಮ್ಮಣಿ, ಸೋಮಪ್ರಭಾ, ಸರ್ಕಾರಿ ನಾಮನಿರ್ದೇಶಿತ ನಿರ್ದೇಶಕ ಚಂದ್ರಶೇಖರ್ ರಾಜೇ ಅರಸ್, ಮುಖಂಡ ಪುಟ್ಟರಾಜು, ಮುಖ್ಯ ಕಾರ್ಯನಿರ್ವಾಹಕ ಆನಂದ್ ರಾಜೇ ಅರಸ್, ಸಿಬ್ಬಂದಿ ಆದರ್ಶ್ ಭಾಗವಹಿಸಿದ್ದರು.
ಬಾರಸೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ₹6 ಲಕ್ಷ ನಿವ್ವಳ ಲಾಭ ರೈತರು, ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.