ಮೈಸೂರು: ‘ಅನಿವಾರ್ಯ ಸಂದರ್ಭಗಳಲ್ಲಿ ರೈತರು ತಾವು ಬೆಳೆದ ಕಬ್ಬನ್ನು ಮತ್ತೊಂದು ಕಾರ್ಖಾನೆಗೆ ಸಾಗಿಸಲು ನಿರ್ಬಂಧ ಹೇರಬಾರದು. ತೂಕದಲ್ಲಿ ಆಗುತ್ತಿರುವ ಮೋಸ ತಪ್ಪಿಸಿ, ಸಕಾಲದಲ್ಲಿ ಕಬ್ಬಿನ ಹಣ ಪಾವತಿ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ರೈತರು ಹಾಗೂ ಸಕ್ಕರೆ ಕಾರ್ಖಾನೆ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ ಬೆಳೆದ ಕಬ್ಬನ್ನು ಹೊರ ಜಿಲ್ಲೆ– ರಾಜ್ಯಕ್ಕೆ ಸಾಗಣೆ ಮಾಡಲು ಜಿಲ್ಲಾಡಳಿತ ನಿರ್ಬಂಧ ವಿಧಿಸಿಲ್ಲ. ಇದಕ್ಕೆ ಕಾರ್ಖಾನೆ ಆಕ್ಷೇಪ ಏಕೆ’ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದರು.
‘ಸರ್ಕಾರದ ನಿಯಮಗಳಂತೆಯೇ ಕಬ್ಬು ಬೆಳೆಗಾರರ ಜೊತೆಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ನಮ್ಮ ಜೊತೆ ಒಪ್ಪಂದ ಮಾಡಿಕೊಂಡವರು ನಮಗೇ ಕೊಡಬೇಕು. ಒಪ್ಪಂದ ರಹಿತವಾಗಿ ಬೆಳೆಯುವ ರೈತರು ತಾವು ಬಯಸಿದಲ್ಲಿಗೇ ಒಯ್ಯಬಹುದು’ ಎಂದು ಬಣ್ಣಾರಿ ಅಮ್ಮನ್ ಕಾರ್ಖಾನೆಯ ಅಧಿಕಾರಿಗಳು ವಾದಿಸಿದರು.
‘ಒಪ್ಪಂದ ಮಾಡಿಕೊಂಡ ಮಾತ್ರಕ್ಕೆ ನಿಮಗೇ ಕೊಡಬೇಕು ಎನ್ನುವುದು ಸರಿಯಲ್ಲ. ನೀವು ಕಬ್ಬು ಕಟಾವು ಮಾಡಲು ವಿಳಂಬ ಮಾಡಿದಲ್ಲಿ, ಸೂಕ್ತ ದರ ನೀಡದೇ ಹೋದಲ್ಲಿ ರೈತರು ತಾವು ಬಯಸಿದ ಮತ್ತೊಂದು ಕಾರ್ಖಾನೆಗೆ ಕಬ್ಬು ಒಯ್ಯಲು ಅವಕಾಶ ನೀಡಬೇಕು. ನೀವು ರೈತಸ್ನೇಹಿ ಆದರೆ ಯಾವ ಬೆಳೆಗಾರನೂ ಮತ್ತೊಂದು ಕಡೆಗೆ ಕಬ್ಬು ಒಯ್ಯುವುದಿಲ್ಲ’ ಎಂದು ಜಿಲ್ಲಾಧಿಕಾರಿ ಹೇಳಿದರು.
ಕಾರ್ಖಾನೆ ಜೊತೆಗಿನ ಒಪ್ಪಂದದಲ್ಲಿ ಕೆಲವು ರೈತಪರ ಅಂಶಗಳನ್ನೂ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಲು ಸಭೆಯು ತೀರ್ಮಾನ ಕೈಗೊಂಡಿತು.
ಪಟ್ಟಿ ನೀಡಲು ಸೂಚನೆ: ‘ನಿಗದಿಯಂತೆ 12 ತಿಂಗಳಿಗೆ ಕಬ್ಬು ಕಟಾವು ಮಾಡದೇ 13–14 ತಿಂಗಳವರೆಗೆ ಕಾಯಿಸುತ್ತಿದ್ದಾರೆ. ಇದರಿಂದ ಇಳುವರಿ ಕುಸಿದು ರೈತರಿಗೆ ನಷ್ಟವಾಗುತ್ತಿದೆ. ಕಬ್ಬು ಕಟಾವು ಮಾಡಲು ಕಾರ್ಖಾನೆಯ ಫೀಲ್ಡ್ ಅಧಿಕಾರಿಗಳು ಲಂಚ ಕೇಳುತ್ತಾರೆ’ ಎಂದು ರೈತರು ದೂರಿದರು.
‘ಲಂಚಕ್ಕೆ ಬೇಡಿಕೆ ಇಡುವ ಅಧಿಕಾರಿಗಳನ್ನು ಕಾರ್ಖಾನೆಯವರು ತೆಗೆದು ಹಾಕಬೇಕು. ಜುಲೈ 15ರಿಂದ ಆಗಸ್ಟ್ 15ರವರೆಗೆ ಯಾವ ಯಾವ ಜಮೀನಿನಲ್ಲಿ ಕಬ್ಬು ಕಟಾವು ಮಾಡಲಾಗುತ್ತದೆ ಎಂಬುದರ ಪಟ್ಟಿಯನ್ನು ಇನ್ನೊಂದು ವಾರದಲ್ಲಿ ನನಗೆ ನೀಡಬೇಕು. ಇನ್ನು ಮುಂದೆ ಪ್ರತಿ ತಿಂಗಳು ಈ ಮಾಹಿತಿ ನೀಡಿ, ಅದರಂತೆಯೇ ಕಟಾವು ಮಾಡಬೇಕು. ವಿಳಂಬ ಮಾಡಬಾರದು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
‘ನಿಯಮದಂತೆ ಕಬ್ಬು ಕಟಾವು ಮಾಡಿದ 14 ದಿನದ ಒಳಗೆ ಹಣ ಪಾವತಿಸಬೇಕು. ಇಲ್ಲವಾದಲ್ಲಿ ವಿಳಂಬವಾದ ದಿನಗಳಿಗೆ ಬಡ್ಡಿ ನೀಡಬೇಕು’ ಎಂದು ಹೇಳಿದರು.
‘ಕಾರ್ಖಾನೆ ವ್ಯಾಪ್ತಿಯಲ್ಲಿ ಈ ಹಿಂದೆ 10.5 ರಿಕವರಿ ಇಳುವರಿ ಸಿಗುತ್ತಿದ್ದು, ಈಗ ಬೇಕಂತಲೇ ಕಡಿಮೆ ತೋರಿಸುತ್ತಿದ್ದಾರೆ’ ಎಂದು ರೈತರು ದೂರಿದರು. ‘ಇಳುವರಿ ಮಾಪನವನ್ನು ಪಾರದರ್ಶಕವಾಗಿ ಮಾಡಿ, ಅದರ ವಿಡಿಯೊವನ್ನು ರೈತರಿಗೆ ತೋರಿಸಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
‘ಸಹಕಾರಿ ಬ್ಯಾಂಕುಗಳಲ್ಲಿ ರೈತರು 12 ತಿಂಗಳಿಗೆ ಬೆಳೆ ಸಾಲ ಪಡೆದಿರುತ್ತೇವೆ. ಕಾರ್ಖಾನೆಯವರು ಸಕಾಲಕ್ಕೆ ಕಟಾವು ಮಾಡಿ, ಹಣ ಪಾವತಿ ಮಾಡದ ಕಾರಣ ರೈತರು ಸುಸ್ತಿದಾರರಾಗುತ್ತಿದ್ದು, ಅಧಿಕ ಬಡ್ಡಿ ಪಾವತಿ ಮಾಡಬೇಕಿದೆ. ಹೀಗಾಗಿ ಕಬ್ಬಿನ ಬೆಳೆ ಸಾಲದ ಅವಧಿಯನ್ನು 12 ತಿಂಗಳ ಬದಲಾಗಿ 18 ತಿಂಗಳಿಗೆ ಏರಿಸಬೇಕು. ಕಟಾವು ಹಾಗೂ ಸಾಗಣೆ ವೆಚ್ಚವನ್ನು ಕಾರ್ಖಾನೆಯೇ ವಹಿಸಬೇಕು. ಏಕರೂಪ ಬೆಲೆ ನಿಗದಿ ಮಾಡಬೇಕು. ಹೊಲದಲ್ಲೇ ದರ ನಿಗದಿಯಾಗಬೇಕು’ ಎಂದು ರೈತರು ಬೇಡಿಕೆ ಇಟ್ಟರು.
ಜಿ.ಪಂ ಉಪಕಾರ್ಯದರ್ಶಿ ಕೃಷ್ಣಂರಾಜು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ರವಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೆಸ್ವಾಮಿ, ರೈತ ಮುಖಂಡರಾದ ಹಳ್ಳಿಕೆರೆಹುಂಡಿ ಭಾಗ್ಯರಾಜ್, ವಳಗೆರೆ ಗಣೇಶ್, ಹನುಮಯ್ಯ, ಕೆರೆಹುಂಡಿ, ಹತ್ತಳ್ಳಿ ದೇವರಾಜು, ಸೋಮಶೇಖರ್, ಜಯರಾಂ, ವೆಂಕಟೇಶ್ ಪಾಲ್ಗೊಂಡರು.
’ಹೆಚ್ಚುವರಿ ತೂಕಯಂತ್ರ ಅಳವಡಿಸಿ’
‘ಕಟಾವು ಮಾಡಿ ತಂದ ಕಬ್ಬನ್ನು ಕಾರ್ಖಾನೆ ಮುಂದೆ ದಿನಗಟ್ಟಲೆ ಕಾಯಿಸಿ ನಂತರ ತೂಕ ಮಾಡುತ್ತಿದ್ದು ಇದರಿಂದ ತೂಕ ಕಡಿಮೆ ಆಗುತ್ತಿದೆ’ ಎಂಬ ರೈತರ ದೂರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ‘ಕಾರ್ಖಾನೆಯ ಪ್ರವೇಶ ದ್ವಾರದಲ್ಲೇ ಕಬ್ಬಿನ ತೂಕ ತೆಗೆದುಕೊಳ್ಳಬೇಕು. ಹೆಚ್ಚುವರಿ ತೂಕದ ಯಂತ್ರ ಅಳವಡಿಸಬೇಕು’ ಎಂದು ಸೂಚಿಸಿದರು. ಒಂದೆರಡು ದಿನದಲ್ಲಿ ಕಾರ್ಖಾನೆಗೆ ತೆರಳಿ ಪರ್ಯಾಯ ಕ್ರಮಗಳ ಕುರಿತು ಪರಿಶೀಲಿಸುವಂತೆ ಕೃಷಿ ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.