ADVERTISEMENT

ಕಲ್ಪತರು ವೃತ್ತದ ಸರ್ಕಾರಿ ಭೂಮಿ ವ್ಯಾಜ್ಯ: ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ

ಜೆಸಿಬಿಯೊಂದಿಗೆ ತೆರವಿಗೆ ಬಂದ ನಗರಸಭೆ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2023, 14:25 IST
Last Updated 10 ಡಿಸೆಂಬರ್ 2023, 14:25 IST
ಸರ್ಕಾರಿ ನಿವೇಶನದಲ್ಲಿ ತಲೆ ಎತ್ತಿರುವ ಅಂಗಡಿ ಮತ್ತು ಕಾಂಪೌಂಡ್
ಸರ್ಕಾರಿ ನಿವೇಶನದಲ್ಲಿ ತಲೆ ಎತ್ತಿರುವ ಅಂಗಡಿ ಮತ್ತು ಕಾಂಪೌಂಡ್   

ಹುಣಸೂರು: ನಗರದ ಕಲ್ಪತರು ವೃತ್ತದ ಖಾಲಿ ನಿವೇಶನಕ್ಕೆ ಸಂಬಂಧಿಸಿದಂತೆ ನಗರಸಭೆ ಮತ್ತು ಖಾಸಗಿ ವ್ಯಕ್ತಿಯೊಬ್ಬರ ನಡುವೆ ವ್ಯಾಜ್ಯ ನಡೆದಿದ್ದು, ನ್ಯಾಯಾಲಯ ಕಾಯಂ ತಡೆಯಾಜ್ಞೆ ನಡುವೆಯೂ ಖಾಸಗಿ ವ್ಯಕ್ತಿ ಕಾನೂನು ಬಾಹಿರ ಚಟುವಟಿಕೆ ನಡೆಸಿದ್ದನ್ನು ತೆರವುಗೊಳಿಸಲು ಸ್ಥಳಕ್ಕೆ ಬಂದ ನಗರಸಭೆ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ.

ಘಟನೆ ವಿವರ: ನಗರದ ಕಲ್ಪತರು ವೃತ್ತದಲ್ಲಿನ ಖಾಲಿ ನಿವೇಶನ ನಗರಸಭೆ ಆಸ್ತಿ ಎಂದು ಅಧಿಕಾರಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ಮಧ್ಯೆ ನಿವೇಶನ ಆಕ್ರಮಿಸಿಕೊಂಡಿರುವ ವ್ಯಕ್ತಿ ಹಿಜಬುಲ್ ರೆಹಮಾನ್ ಆಸ್ತಿ ತಮ್ಮ ಹೆಸರಿನಲ್ಲಿದ್ದು ಸೂಕ್ತ ಬಂದೋಬಸ್ತ್ ಮಾಡಿಕೊಂಡಿರುವುದಾಗಿ ನಗರಸಭೆ ಅಧಿಕಾರಿ ಶರ್ಮಿಲಾ ಅವರಿಗೆ ತಿಳಿಸಿದರು. ಸ್ಥಳಕ್ಕೆ ನಗರಸಭೆ ಯಾವುದೇ ದಾಖಲಾತಿಯನ್ನು ತರದೆ ಏಕಾಏಕಿ ಜೆಸಿಬಿಯೊಂದಿಗೆ ಧಾವಿಸಿ ಸ್ಥಳೀಯರ ಕೆಂಗಣ್ಣಿಗೆ ಗುರಿಯಾದರು.

ಉದ್ಯಾನ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಾಗರಿಕರು ಸರ್ಕಾರಿ ನಿವೇಶನವನ್ನು ನಗರಸಭೆ ದಶಕಗಳಿಂದ ಸಾರ್ವಜನಿಕರ ಬಳಕೆಗೆ ಎಂದು ಕಾದಿಟ್ಟಿದ್ದು, ಈ ನಿವೇಶನವನ್ನು ಉದ್ಯಾನಕ್ಕೆ ಕಾದಿಡಬೇಕು ಎಂಬ ಅಹವಾಲು ನಗರಸಭೆಗೆ ನೀಡಿದ್ದಾರೆ.

ADVERTISEMENT

‘ಕಲ್ಪತರು ವೃತ್ತದಿಂದ ಕಿರುಜಾಜಿ ಗ್ರಾಮ ಸಂಪರ್ಕಿಸುವ ಈ ರಸ್ತೆ 2019ರಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಗರಸಭೆ ವ್ಯಾಪ್ತಿಗೆ ಹಸ್ತಾಂತರಗೊಂಡ ಹಿನ್ನೆಲೆಯಲ್ಲಿ ಲೋಕೋಪಯೋಗಿ ನಿಯಮ ಅನ್ವಯಿಸುವುದಿಲ್ಲ’ ಎಂದು ಇಲಾಖೆ ಅಧಿಕಾರಿ ಬೋಜರಾಜ್ ತಿಳಿಸಿದ್ದಾರೆ.

‘ನಗರಸಭೆಯಿಂದ ನಿವೇಶನದಲ್ಲಿ ಹಾಕಿರುವ ಪೆಟ್ಟಿಗೆ ಅಂಗಡಿ ಮತ್ತು ಸಿಮೆಂಟ್ ಕಾಂಪೌಂಡ್ ಗೋಡೆ ತೆರವುಗೊಳಿಸುವ ಸಂಬಂಧ ಸೋಮವಾರ ಜಿಲ್ಲಾಧಿಕಾರಿಯವರ ಸಲಹೆ ಪಡೆದು ಮುಂದಿನ ಕ್ರಮಕ್ಕೆ ಬದ್ಧವಾಗಿದೆ. ಈ ಮಧ್ಯೆ ನಗರಸಭೆಯಿಂದ ನೋಟಿಸ್ ಜಾರಿಗೊಳಿಸಿದ್ದೇವೆ’ ಎಂದು ನಗರಸಭೆ ಎಇಇ ಮತ್ತು ಪ್ರಭಾರ ಪೌರಾಯುಕ್ತರಾದ ಶರ್ಮಿಳಾ ತಿಳಿಸಿದರು.

ಹುಣಸೂರು ನಗರದ ಕಲ್ಪತರು ವೃತ್ತಕ್ಕೆ ಹೊಂದಿಕೊಂಡಿರುವ ಸರ್ಕಾರಿ ನಿವೇಶನವನ್ನು ಖಾಸಗಿ ವ್ಯಕ್ತಿ ಅತಿಕ್ರಮಿಸಿಕೊಂಡು ಕಾಂಪೌಂಡ್ ನಿರ್ಮಿಸಿರುವುದನ್ನು ತೆರವುಗೊಳಿಸಲು ನಗರಸಭೆ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿದಾಗ ಮಾತಿನ ಚಕಮಕಿ ನಡೆಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.