ಪಿರಿಯಾಪಟ್ಟಣ: ‘ಭ್ರಷ್ಟಾಚಾರದಲ್ಲಿ ಮುಳುಗಿರುವ ಶಾಸಕ ಕೆ.ಮಹದೇವ್ ಮತ್ತು ಅವರ ಪುತ್ರ ಪಿ.ಎಂ. ಪ್ರಸನ್ನ ಮತದಾರರಿಗೆ ಕುಕ್ಕರ್, ಮೂಗುತಿ ಮತ್ತು ಸೀರೆ ಹಂಚಲು ಮುಂದಾಗಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಕೆ.ವೆಂಕಟೇಶ್ ಆರೋಪಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿ ಬಳಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆ ಗೊಂಡ ಮುಖಂಡರನ್ನು ಸ್ವಾಗತಿಸಿ ಮಾತನಾಡಿದರು.
‘5 ವರ್ಷಗಳಿಂದ ಭ್ರಷ್ಟಾಚಾರ ನಡೆಸಿ, ಲೂಟಿ ಹೊಡೆದಿರುವ ಅಪ್ಪ– ಮಕ್ಕಳು (ಕೆ.ಮಹದೇವ್, ಪಿ.ಎಂ. ಪ್ರಸನ್ನ) ಏನು ಕೊಟ್ಟರೂ ಪಡೆದುಕೊಳ್ಳಿ. ಆದರೆ, ನಿಮ್ಮ ಮತವನ್ನು ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ನೀಡಿ’ ಎಂದರು.
‘ಶಾಸಕ ಕೆ.ಮಹದೇವ್ ಅವರನ್ನು ಬೆಳೆಸಿ ಮುನ್ನೆಲೆಗೆ ತಂದಿದ್ದೇ ನಾನು. ಅವರ ಕೆಟ್ಟ ಗುಣಗಳನ್ನು ಚೆನ್ನಾಗಿ ತಿಳಿದಿದ್ದವರು ನನಗೆ ಕಿವಿಮಾತು ಹೇಳಿದರೂ ಕೇಳಲಿಲ್ಲ. ಈಗ, ತಾಲ್ಲೂಕಿನ ಜನ ಪರಿತಪಿಸುವಂತಾಗಿದೆ’ ಎಂದು ದೂರಿದರು.
‘ತಾಲ್ಲೂಕಿನಲ್ಲಿ ಒಂದೇ ಒಂದು ಶಾಶ್ವತ ಕಾಮಗಾರಿ ನಡೆಸಲು ಸಾಧ್ಯವಾಗಿಲ್ಲ. ಮಸಣಿಕಮ್ಮ ದೇವಸ್ಥಾನ ಅಭಿವೃದ್ಧಿ ಮಾಡಿಸುತ್ತೇನೆ ಎಂದು ನಕಲಿ ರಶೀದಿ ಪುಸ್ತಕ ಮುದ್ರಿಸಿ ದೇವರ ಹೆಸರಿನಲ್ಲಿ ₹1.26 ಕೋಟಿ ಹಣ ಸಂಗ್ರಹಿಸಿ ವಂಚನೆ ಎಸಗಿದ್ದಾರೆ ಎಂದು ಜನರೇ ಆರೋಪಿಸುತ್ತಿದ್ದಾರೆ’ ಎಂದರು.
ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಟಿಎಪಿಸಿಎಂಎಸ್ ಸದಸ್ಯ ಬಿ.ಮುಕೇಶ್ ಕುಮಾರ್ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು, ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಎಚ್.ಡಿ.ಗಣೇಶ್, ಪುರಸಭಾ ಸದಸ್ಯರಾದ ಮಂಜುಳಾ, ಎಚ್.ಕೆ.ಮಂಜುನಾಥ್, ರವಿ, ತಾ.ಪಂ ಮಾಜಿ ಸದಸ್ಯರಾದ ಆರ್.ಎಸ್.ಮಹದೇವ್, ಟಿ.ಈರಯ್ಯ, ಕೆ.ಆರ್.ನಿರೂಪ, ಕಾನೂರು ಗೋವಿಂದೇಗೌಡ, ಬಿ.ವಿ.ಅನಿತಾ, ಪ್ರಕಾಶ್, ಬಿ.ವಿ.ಜವರೇಗೌಡ, ಎಚ್.ಪಿ.ಪರಮೇಶ್, ಚೆನ್ನಬಸವ ರಾಜು, ಸೀಗೂರು ವಿಜಯ ಕುಮಾರ್, ಮೋಹನ್, ಬೆಕ್ಕರೆ ನಂಜುಂಡಸ್ವಾಮಿ, ಪಿ.ಮಹದೇವ್, ರಾಮಚಂದ್ರ, ಪಿ.ಎಸ್.ಹರೀಶ್, ಮಲ್ಲಿಕಾರ್ಜುನ್, ಪದ್ಮಲತಾ, ಮಂಜುಳಾ ನಾಗೇಶ್, ಕುಮಾರ್, ಪಿ.ಎನ್.ಚಂದ್ರಶೇಖರ್, ರಾಜೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.