ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆಯ ಮೇಲೆ ನಡೆದಿರುವ ಸಿಬಿಐ ದಾಳಿ ಪೂರ್ವನಿಯೋಜಿತ. ಇದು ಬಿಜೆಪಿಯ ಸೇಡಿನ ರಾಜಕಾರಣದ ಭಾಗ ಎಂದು ಕಾಂಗ್ರೆಸ್ ಮುಖಂಡ ಆರ್.ಧ್ರುವನಾರಾಯಣ ಟೀಕಿಸಿದರು.
ಸ್ವಾಯತ್ತ ಸಂಸ್ಥೆಯಾಗಿದ್ದ ಸಿಬಿಐ ಬಿಜೆಪಿ ಆಡಳಿತದಲ್ಲಿ ಕಮ್ಯೂನಲ್ ಇನ್ವೆಸ್ಟಿಗೇಷನ್ ಬ್ಯೂರೊ ಆಗಿದೆ. ಬಿಜೆಪಿಯ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಡಿಕೆಶಿ ಅವರು ಪಕ್ಷವನ್ನು ಸಂಘಟಿಸುತ್ತಿರುವ ರೀತಿಯನ್ನು ನೋಡಿ ಬಿಜೆಪಿಗೆ ನಡುಕ ಶುರುವಾಗಿದೆ. ಇದರಿಂದ ಅವರನ್ನು ಟಾರ್ಗೆಟ್ ಮಾಡಿದೆ. ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿ ಪದೇ ಪದೇ ದಾಳಿ ನಡೆಯುತ್ತಿದೆ ಎಂದು ಕಿಡಿಕಾರಿದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಅರಿತಿರುವ ಬಿಜೆಪಿ ಅಡ್ಡದಾರಿ ಹಿಡಿದಿದೆ. ಡಿಕೆಶಿ ಅವರು ಹೆಣೆಯುತ್ತಿರುವ ತಂತ್ರಗಳಿಗೆ ಬಿಜೆಪಿ ಬೆದರಿದೆ. ಈ ಕಾರಣಕ್ಕಾಗಿಯೇ ಸಿಬಿಐ ಮೂಲಕ ದಾಳಿ ನಡೆಸಿದೆ. ಈ ಸೇಡಿನ ಬೆಂಕಿ ಮುಂದೊಂದು ದಿನ ಬಿಜೆಪಿಯನ್ನೇ ಸುಡಲಿದೆ ಎಂದು ಹರಿಹಾಯ್ದರು.
ಇಂತಹ ದಾಳಿಗಳಿಗೆ ಅವರು ಹೆದರುವುದಿಲ್ಲ. ತನಿಖೆಯಾದ ಬಳಿಕ ಪರಿಶುದ್ಧರಾಗಿಯೇ ಆಚೆ ಬರ್ತಾರೆ. ಆದರೆ ಚುನಾವಣೆ ಸಂದರ್ಭದಲ್ಲಿ ಏಕೆ ದಾಳಿ ಮಾಡಬೇಕು ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡ ವಾಸು, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್, ಶಿವಣ್ಣ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.