ಮೈಸೂರು: ‘ಅಗತ್ಯಕ್ಕೆ ತಕ್ಕಂತೆ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಳ್ಳಬೇಕು. ಮಕ್ಕಳು ಸದಾ ಮೊಬೈಲ್ ಫೋನ್ ಜಗತ್ತಿನಲ್ಲೇ ಮುಳುಗದಂತೆ ಪೋಷಕರು ಎಚ್ಚರಿಕೆ ವಹಿಸಬೇಕು’ ಎಂದು ನಿಮಿಷಾಂಬ ನೃತ್ಯ ಶಾಲೆಯ ಅಧ್ಯಕ್ಷ, ವಿದ್ವಾನ್ ಶ್ರೀಧರ್ ಜೈನ್ ಸಲಹೆ ನೀಡಿದರು.
ನಗರದ ಜೆಎಲ್ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ಭಾನುವಾರ ಏರ್ಪಡಿಸಿದ್ದ ಎಂ.ಬಿ.ಸಂತೋಷ್ ಅವರ ‘ಗೆಳತಿ’ ಮತ್ತು ಬಿ.ಶೋಭಾ ಅವರ ‘ವೈಟ್ನರ್’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಮಕ್ಕಳು ಮೊಬೈಲ್ ಫೋನ್, ಯೂಟ್ಯೂಬ್ನಲ್ಲಿ ಮುಳುಗಿದ್ದಾರೆ. ಅತಿಯಾದ ಪ್ರೀತಿ ಹಾಗೂ ಹಕ್ಕನ್ನು ಕೊಡಬಾರದು. ಸಮಾಜದಲ್ಲಿ ಮಕ್ಕಳು ಹೇಗೆ ಭವಿಷ್ಯ ರೂಪಿಸಿಕೊಳ್ಳಬೇಕು ಮತ್ತು ಸಮಾಜಕ್ಕೆ ಅವರಿಂದ ಸಿಗುವ ಕೊಡುಗೆಗಳನ್ನು ತಿಳಿಸಬೇಕು. ತಂದೆ-ತಾಯಿಯೊಂದಿಗೆ ಕುಟುಂಬದರನ್ನು ಪ್ರೀತಿಸುವ ಮನೋಭಾವ ಬೆಳೆಸಬೇಕು’ ಎಂದರು.
‘ತುಂಬು ಕುಟುಂಬ ಇದ್ದರೆ ಒಳ್ಳೆಯ ಮನಸ್ಸಿನಿಂದ ಬೆಳೆಯುತ್ತಾರೆ. ಮಕ್ಕಳಿಗೆ ಜೀವನದ ವೌಲ್ಯಗಳನ್ನು ತಿಳಿಸಿ, ಸಾಧನೆಗೆ ಪ್ರೋತ್ಸಾಹಿಸಿಬೇಕು’ ಎಂದು ತಿಳಿಸಿದರು.
ಎಂ.ದೀಕ್ಷಾ, ವೇದಾಂತ್ ಎನ್.ಭಾರದ್ವಾಜ್, ಧ್ಯೇಯ ವಿಶ್ವನಾಥ್ಗೆ ‘ಬಾಲಶ್ರೀ ಪ್ರಶಸ್ತಿ’, ಪಿ.ಪ್ರೇರಣಾಗೆ ‘ಸಾಧನಶ್ರೀ ಪ್ರಶಸ್ತಿ’, ಎ.ಎನ್.ರಮೇಶ್ ಗುಬ್ಬಿ, ಎನ್.ವಿ.ರಮೇಶ್ ಅವರಿಗೆ ‘ಸಾಹಿತ್ಯ ಸಿಂಧು ಪ್ರಶಸ್ತಿ’, ಎಸ್.ಹರ್ಷ, ರತ್ನ ಬಡವನಹಳ್ಳಿ ಅವರಿಗೆ ‘ಸಾಧನರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ.ಸಂತೋಷ್, ಕವಯತ್ರಿ ಎ.ಹೇಮಗಂಗಾ, ಲೇಖಕಿ ಬಿ.ಶೋಭಾ, ಉಪನ್ಯಾಸಕ ಕೃ.ಪಾ.ಮಂಜುನಾಥ್, ನಾದ ವಿದ್ಯಾಲಯ ಸಂಗೀತ ಮತ್ತು ನೃತ್ಯ ಅಕಾಡೆಮಿ ನಿರ್ದೇಶಕ ವಿದ್ವನ್ ನವೀನ್ ಎಂ.ಎಸ್.ಅಂದಗಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.