ಮೈಸೂರು: ಒಳ ಚರಂಡಿ ಕಾರ್ಮಿಕರು ಇಲ್ಲಿನ ಪಾಲಿಕೆಯ ಮುಂಭಾಗ ಕಾಯಂಗೊಳಿಸಲು ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಸೋಮವಾರ 2ನೇ ದಿನಕ್ಕೆ ಕಾಲಿಟ್ಟಿದೆ. ಎರಡೇ ದಿನಕ್ಕೆ ಪಾಲಿಕೆಯಲ್ಲಿ ಒಳಚರಂಡಿಗೆ ಸಂಬಂಧಿಸಿದ 80ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದು, ಅವು ವಿಲೇವಾರಿ ಆಗಿಲ್ಲ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಮುಖ್ಯವಾಗಿ, ಉದಯಗಿರಿ ಭಾಗದಲ್ಲೇ ಹೆಚ್ಚು ದೂರುಗಳು ಬಂದಿವೆ. ಇವುಗಳನ್ನು ಸರಿಪಡಿಸುವ ಒಳ ಚರಂಡಿ ಕಾರ್ಮಿಕರು ಧರಣಿ ಕುಳಿತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ನಗರ ಗಬ್ಬೆದ್ದು ನಾರಲಿದೆ.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಅವರು ಪ್ರತಿಭಟನೆ ಸ್ಥಳಕ್ಕೆ ಡಿ.16ರಂದು ಬೆಳಿಗ್ಗೆ 10.30ಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಅವರೊಂದಿಗೆ ಸಭೆ ನಡೆಸಲಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಮೈಸೂರು ಮಹಾನಗರ ಪಾಲಿಕೆ ಒಳಚರಂಡಿ ಸಹಾಯಕರು ಹಾಗೂ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಪಳನಿ, ‘ನಮ್ಮಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು ನಾವು ಭಾನುವಾರದವರೆಗೆ ಎಲ್ಲ ದೂರುಗಳನ್ನು ವಿಲೇವಾರಿ ಮಾಡಿ ಪ್ರತಿಭಟನೆಗೆ ಕುಳಿತಿದ್ದೇವೆ. ಇನ್ನಾದರೂ ನಮ್ಮನ್ನು ಕಾಯಂಗೊಳಿಸಬೇಕು’ ಎಂದು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.