ಮೈಸೂರು: ‘ಮನುಷ್ಯನ ಬದುಕಿಗೆ ಪರಿಪೂರ್ಣತೆ ಬರುವುದು ಸರ್ವತೋಮುಖ ಅಭಿವೃದ್ಧಿಯಾದಾಗ ಮಾತ್ರ’ ಎಂದು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಕೆ.ಅನಂತರಾಮು ಹೇಳಿದರು.
ಇಲ್ಲಿನ ಊಟಿ ರಸ್ತೆಯ ಜೆಎಸ್ಎಸ್ ಪಿಯು ಕಾಲೇಜಿನಲ್ಲಿ ಶನಿವಾರ 2025–26ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ವೇದಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯೆ ಸಂಪತ್ತು ಅಮೂಲ್ಯವಾದುದು. ಅದರೊಂದಿಗೆ ಮಾನವೀಯ ಗುಣಗಳೂ ಬೇಕು. ನಿರಹಂಕಾರ ಗುಣ, ವಿನಯಶೀಲತೆ, ದೈವಭಕ್ತಿ, ದೇಶಭಕ್ತಿ, ಗುರುಭಕ್ತಿ, ಸ್ನೇಹಶೀಲತೆ ಹಾಗೂ ಎಲ್ಲರನ್ನೂ ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಕನ್ನಡ ಭಾಷೆ ಸಂರಕ್ಷಣೆ ವಿಷಯದಲ್ಲಿ ವಚನಕಾರರ ಪಾತ್ರ ದೊಡ್ಡದು. ಜನಸಾಮಾನ್ಯರಿಗೆ ಒಳ್ಳೆಯ ವಿಚಾರಗಳನ್ನು ಸರಳವಾದ ಭಾಷೆಯಲ್ಲಿ ತಿಳಿಸುವ ಜೊತೆಗೆ ಕನ್ನಡದ ಸಂರಕ್ಷಣೆಯನ್ನೂ ಮಾಡಿದರು. ನಮ್ಮ ಮಾತೃಭಾಷೆಯಾದ ಕನ್ನಡವನ್ನು ಉಳಿಸಿಕೊಳ್ಳುವ ಪ್ರೇಮ ನಮ್ಮೆಲ್ಲರಲ್ಲೂ ಇರಬೇಕು’ ಎಂದರು.
ಜೆಎಸ್ಎಸ್ ಕಾಲೇಜು ಸಮುಚ್ಚಯದ ಮುಖ್ಯಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ, ‘ಕಾಲೇಜುಗಳ ಪದವೀಧರರನ್ನು ತಯಾರಿಸುವ ಕಾರ್ಖಾನೆಯಾಗದೆ ಪರಿಪೂರ್ಣ ವ್ಯಕ್ತಿತ್ವ ಬೆಳೆಸುವ ಮಾನವ ಸಂಪನ್ಮೂಲ ಕೇಂದ್ರವಾಗಬೇಕು’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ಚಲನಚಿತ್ರ ನಟ ಗೋಪಾಲ್, ಅಥ್ಲೀಟ್ ಧನುಷ ಎಂ.ಆರ್. ಮಾತನಾಡಿದರು.
2024–25ನೇ ಸಾಲಿನಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪ್ರಾಂಶುಪಾಲ ಎಸ್.ನಂಜುಂಡಸ್ವಾಮಿ, ಉಪನ್ಯಾಸಕರಾದ ಟಿ.ಗುರುಪಾದಸ್ವಾಮಿ, ಎಚ್.ಆರ್. ಗಾಯತ್ರಿ, ಕ್ರೀಡಾ ಚಟುವಟಿಕೆಗಳ ಸಂಚಾಲಕ ಟಿ.ಅರವಿಂದ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.