ಮೈಸೂರು: ‘ಕೇಂದ್ರ ಸರ್ಕಾರದ ಚುನಾವಣಾ ಬಾಂಡ್ ಹಗರಣವನ್ನು ಸುಪ್ರೀಂಕೋರ್ಟ್ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ವಾದಿ) ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಒತ್ತಾಯಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯು ಬಾಂಡ್ ಮೂಲಕ ಸುಮಾರು ₹8,252 ಕೋಟಿ ಪಡೆದಿದೆ. ಇಲ್ಲಿ ಅಧಿಕಾರ ದುರುಪಯೋಗವಾಗಿದೆ. ಹಲವು ಉದ್ಯಮಿಗಳು ತನಿಖಾ ಸಂಸ್ಥೆಗಳಿಗೆ ಹೆದರಿ, ಉದ್ಯಮದ ಲಾಭಕ್ಕಾಗಿ ಹಣ ನೀಡಿರುವುದು ಕಂಡುಬಂದಿದ್ದು, ನರೇಂದ್ರ ಮೋದಿ ಸರ್ಕಾರದ ಭ್ರಷ್ಟಾಚಾರವನ್ನು ಸೂಚಿಸುತ್ತದೆ. ಅಲ್ಲದೇ, ರಾಜಕೀಯ ದ್ವೇಷ ಸಾಧನೆಯಲ್ಲೂ ಕೇಂದ್ರ ನಿರತವಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನ ಖಂಡನೀಯ. ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕು’ ಎಂದು ಆಗ್ರಹಿಸಿದರು.
‘ಬರ ಪರಿಹಾರ ತಂದು ರಾಜ್ಯದ ಹಿತ ಕಾಯುವಲ್ಲಿ ಬಿಜೆಪಿ ಸಂಸದರು ವಿಫಲವಾಗಿದ್ದಾರೆ. ಎರಡು ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣ ವಿಷಯದಲ್ಲೂ ಪಕ್ಷ ಯಾವುದೇ ಕ್ರಮ ಕೈಗೊಂಡಿಲ್ಲ. ಇಂದು ಮತ್ತೆ ಅಧಿಕಾರ ಪಡೆಯಲು ಅಭ್ಯರ್ಥಿಗಳನ್ನು ಬದಲಾಯಿಸಿ, ಮತದಾರರ ದಿಕ್ಕು ತಪ್ಪಿಸುತ್ತಿದ್ದಾರೆ. ಇಂಥ ಫ್ಯಾಸಿಸ್ಟ್ ಮನೋಭಾವದ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳನ್ನು ರಾಜ್ಯದ ಮತದಾರರು ತಿರಸ್ಕರಿಸಬೇಕು. ಮೈಸೂರು ರಾಜ ಮನೆತನದ ಜನಪರ ನೀತಿಗೆ ವಿರುದ್ಧವಾಗಿರುವ ಬಿಜೆಪಿ ಜೊತೆ ಕೈಜೋಡಿಸಿರುವ ರಾಜವಂಶಸ್ಥ ಯದುವೀರ್ ಅವರನ್ನೂ ಸೋಲಿಸಬೇಕು’ ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಗದೀಶ ಸೂರ್ಯ, ಸಮಿತಿ ಸದಸ್ಯರಾದ ಜಿ. ಜಯರಾಮ್, ಕೆ.ಬಸವರಾಜು, ಎನ್.ವಿಜಯಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.