ಹನಗೋಡು: ಹೋಬಳಿಯ ಭಾರತವಾಡಿ ಮತ್ತು ವೀರನಹೊಸಹಳ್ಳಿ ಗ್ರಾಮಗಳಿಗೆ ಶನಿವಾರ ಬೆಳಿಗ್ಗೆ ಕಾಡಾನೆ ನುಗ್ಗಿ ದಾಂದಲೆ ನಡೆಸಿದೆ.
ರೈಲ್ವೆ ಬ್ಯಾರಿಕೇಡ್ ಮುರಿದು ನಾಗಪುರ ಆರನೇ ಘಟಕದ ಹತ್ತಿರ ಹಾಡಿಗೆ ನುಗ್ಗಿದೆ. ಹಾಡಿ ಜನರು ಆನೆಯನ್ನು ಓಡಿಸಿದ್ದಾರೆ. ನಂತರ ಗಿರೀಶ್, ಶಶಿಕಲಾ ರಾಮಣ್ಣ ಅವರ ಜಮೀನಿನಲ್ಲಿ ಶುಂಠಿ, ಕುಂಬಳ ಬೆಳೆಗಳನ್ನು ತುಳಿದು ನಾಶಪಡಿಸಿದೆ. ಬಳಿಕ, ವೀರನಹೊಸಹಳ್ಳಿ ಗ್ರಾಮದ ಚೌಡಮ್ಮ ಅವರ ಕೊಟ್ಟಿಗೆ ಮತ್ತು ಮನೆಗೆ ಹಾನಿ ಮಾಡಿದೆ. ಕೊಟ್ಟಿಗೆಯಲ್ಲಿ ಕಟ್ಟಿದ ಹಸುವಿಗೆ ಗಾಯಗಳಾಗಿವೆ. ನಂತರ ಅರಣ್ಯ ಇಲಾಖೆಯ ವಸತಿಗೃಹದ ಕಾಂಪೌಂಡ್ ಮತ್ತು ಚಾವಣಿಗೆ ಹಾನಿ ಮಾಡಿದೆ.
ಅರಣ್ಯ ಇಲಾಖೆಯ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಆನೆಯನ್ನು ಕಾಡಿಗಟ್ಟಿದರು.
‘ಎರಡು ದಿನಗಳ ಹಿಂದೆ ಇದೇ ಆನೆ ಟಿಬೆಟನ್ ಕ್ಯಾಂಪ್ನಲ್ಲಿ ದಾಂದಲೆ ನಡೆಸಿತ್ತು. ಮತ್ತೆ ಅದೇ ಚಾಳಿ ಮುಂದುವರಿಸಿದೆ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಸೆರೆಹಿಡಿಯಬೇಕು’ ಎಂದು ದೊಡ್ಡಹೇಜ್ಜೂರು ಗ್ರಾ.ಪಂ ಅಧ್ಯಕ್ಷ ಶಿವಶಂಕರ್ ಒತ್ತಾಯಿಸಿದ್ದಾರೆ.
ವೀರನಹೊಸಹಳ್ಳಿ ವಲಯ ಅರಣ್ಯಾಧಿಕಾರಿ ನಮನ್ ನಾರಾಯಣ ನಾಯ್ಕ, ಉಪ ವಲಯ ಅರಣ್ಯಾಧಿಕಾರಿಗಳಾದ ಚಂದ್ರೇಶ್ ಮತ್ತು ದ್ವಾರಕನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.