ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಮೇ 17ರಿಂದ ಮೂರು ದಿನ ನಡೆದ ರಾಷ್ಟ್ರೀಯ ಆನೆ ಗಣತಿ ಅಭಿಯಾನ ಶುಕ್ರವಾರ ಅಂತ್ಯಗೊಂಡಿತು.
648 ಚ.ಕಿ.ಮೀ ವಿಸ್ತಾರದ ನಾಗರಹೊಳೆಯ 500 ಚ.ಕಿ.ಮೀ ವ್ಯಾಪ್ತಿಯ 91 ಗಸ್ತು ಪ್ರದೇಶದಲ್ಲಿ ಇಲಾಖೆಯ 300 ಸಿಬ್ಬಂದಿ ಗಣತಿ ಕಾರ್ಯ ನಡೆಸಿದರು. ಪ್ರತಿ ತಂಡದಲ್ಲಿ ತಲಾ ನಾಲ್ವರಂತೆ ಪ್ರತಿ ಗಸ್ತುಗಳಲ್ಲಿ ಬೆಳಿಗ್ಗೆ 6ರಿಂದ 10ರವರೆಗೆ ಆನೆ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು. 2017ರಲ್ಲಿ ನಡೆದ ಆನೆ ಗಣತಿಯಲ್ಲಿ ದಕ್ಷಿಣ ಭಾರತದಲ್ಲೇ ರಾಜ್ಯದಲ್ಲಿ ಅತಿ ಹೆಚ್ಚು 6,049 ಆನೆಗಳು ಕಂಡುಬಂದಿದ್ದವು.
ಶುಕ್ರವಾರ ಅರಣ್ಯದೊಳಗಿನ ಕೆರೆ–ಕಟ್ಟೆ, ನೀರಿನ ಹೊಂಡಗಳ ಬಳಿ ಸಿಬ್ಬಂದಿ ಬೆಳಿಗ್ಗೆಯಿಂದ ಸಂಜೆವರೆಗೆ ಮೊಕ್ಕಾಂ ಹೂಡಿ ಸ್ಥಳಕ್ಕೆ ಬರುವ ಆನೆಗಳ ಗಣತಿ ನಡೆಸಲಾಗಿದೆ ಎಂದು ನಾಗರಹೊಳೆ ಹುಲಿ ಯೋಜನಾಧಿಕಾರಿ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದರು.
ಹುಣಸೂರು ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ಮಾತನಾಡಿ, ವಲಯದ 19 ಗಸ್ತಿನಲ್ಲಿ ಮೂರು ದಿನವೂ ಸಿಬ್ಬಂದಿ ಆನೆ ಗಣತಿ ಕಾರ್ಯದಲ್ಲಿ ತೊಡಗಿದ್ದರು. ಮೇ 17ರಂದು ಕೆಲವು ಪ್ರದೇಶದಲ್ಲಿ ಆನೆ ಗೋಚರಿಸಿದ್ದು, ಮೇ 19ರಂದು ವಲಯದ ಮುದ್ದನಹಳ್ಳಿ ಗಸ್ತಿಗೆ ಸೇರಿದ ಕಲ್ಲಾರೆ ಕೆರೆ ಎಂಬಲ್ಲಿ ಆನೆ ಹಿಂಡು ಕಾಣಿಸಿಕೊಂಡಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.