ADVERTISEMENT

ಕಾಡಿನಿಂದ ನಾಡಿಗೆ ಬಂದ ಒಂಟಿ ಸಲಗ

​ಪ್ರಜಾವಾಣಿ ವಾರ್ತೆ
Published 12 ಮೇ 2019, 6:39 IST
Last Updated 12 ಮೇ 2019, 6:39 IST

ಹಂಪಾಪುರ: ಸಮೀಪದ ಕೆಲ ಗ್ರಾಮಗಳಲ್ಲಿ ಒಂಟಿ ಸಲಗವೊಂದು ಕಾಡಿನಿಂದ ನಾಡಿಗೆ ಬಂದಿದ್ದು ರೈತರ ಫಸಲನ್ನು ಹಾಳು ಮಾಡಿರುವುದು ಅರಣ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ.

ಶುಕ್ರವಾರ ಬೆಳಿಗ್ಗೆ ಚುಂಚರಾಯನಹುಂಡಿ ಗ್ರಾಮದ ಜಮೀನಿನಲ್ಲಿ ಕಾಣಿಸಿಕೊಂಡ ಕಾಡಾನೆಯು ಮಧ್ಯಾಹ್ನದ ವೇಳೆಗೆ ಸಮೀಪದ ಕುರುಚಲು ಕಾಡುಳ್ಳ ಮಹೇಶ್ವರ ಬೆಟ್ಟದತ್ತ ತೆರಳಿದೆ. ಶುಕ್ರವಾರ ಚಿರತೆಯ ಕಾರ್ಯಾಚರಣೆ ಇದ್ದುದ್ದರಿಂದ ಆನೆ ಕಾಡಿಗಟ್ಟುವ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಆನೆಯ ಚಲನವಲನಗಳನ್ನು ಮಾತ್ರ ಗಮನಿಸಲಾಗುತ್ತಿತ್ತು.

ಶನಿವಾರ ಬೆಳಿಗ್ಗೆ ಬೆಟ್ಟದಬೀಡು ಗ್ರಾಮದಲ್ಲಿ ಆನೆ ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಸಂಜೆ 5 ಗಂಟೆ ವರಗೆ ಸ್ಥಳದಲ್ಲೇ ಬೀಡು ಬಿಟ್ಟಿದ್ದರು. ನಂತರ ಆನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ಆರಂಭಿಸಿದ್ದು, ಆನೆ ಬೆಟ್ಟದಬೀಡು ಗ್ರಾಮದಿಂದ ಮೈಸೂರು ತಾಲ್ಲೂಕಿನ ಕಲ್ಲಹಳ್ಳಿ ಕೆರೆಯತ್ತ ತಲುಪಿದೆ. ಇನ್ನೂ ಆನೆ ಕಾಡಿಗಟ್ಟುವ ಕಾರ್ಯಾಚರಣೆ ಮುಂದುವರಿದಿದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಮಧು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಸ್ಥಳದಲ್ಲಿ ಎಸಿಎಫ್ ಮರಮೇಶ್ವರ್, ನಂಜನಗೂಡು ಆರ್‌ಎಫ್‌ಒ ಲೋಕೇಶ್ ಮೂರ್ತಿ, ಸರಗೂರು ಆರ್‌ಎಫ್‌ಒ ಮೋಸಿಂ ಭಾಷ ಸೇರಿದಂತೆ 60ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಕಳೆದ ಒಂದು ವಾರದ ಹಿಂದೆ ಕಾಡಿನಿಂದ ನಾಡಿಗೆ ಬಂದ ಎರಡು ಆನೆಗಳು ಮಾದಾಪುರ ಸಮೀಪ ಕೂಲಿ ಕಾರ್ಮಿಕ ಹನುಮಂತರಾಯ ಎಂಬುವವರನ್ನು ತುಳಿದು ಸಾಯಿಸಿದ್ದವು. ನಂತರ ದಸರಾ ಆನೆಗಳ ಮೂಲಕ ಕಾರ್ಯಾಚರಣೆ ಮಾಡಿ ಬಂಡೀಪುರ ಅರಣ್ಯಕ್ಕೆ
ಓಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.