ಮೈಸೂರು: ‘ಪರಿಸರವಿಲ್ಲದೆ ಬದುಕು ಅಸಾಧ್ಯ. ಸೂಕ್ಷ್ಮ ಜೀವಿಯಿಂದ ಹಿಡಿದು, ಪ್ರಾಣಿ, ಪಕ್ಷಿ ಸಂಕುಲ, ಮಾನವರು ಒಳಗೊಂಡಂತೆ ಎಲ್ಲರಿಗೂ ಬದುಕಲು ಸಸ್ಯ ಪ್ರಪಂಚ ಅತ್ಯಗತ್ಯ’ ಎಂದು ಸಸ್ಯ ವಿಜ್ಞಾನ ವಿಭಾಗದ ಸಹಾಯಕ ಅಧ್ಯಾಪಕ ಕೃಷ್ಣಮೂರ್ತಿ ಚಮರಂ ಹೇಳಿದರು.
ಇಲ್ಲಿನ ಸಿದ್ದೇಶ್ವರ ಪ್ರೌಢಶಾಲೆ ಸಭಾಂಗಣದಲ್ಲಿ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ವರ್ಕರ್ಸ್ ಫಾರ್ ಆಕ್ಷನ್ ರಿಸರ್ಚ್ ಹಾಗೂ ಸಂಜೀವಯ್ಯ ಮೆಮೋರಿಯಲ್ ಎಜುಕೇಷನ್ ಸೊಸೈಟಿ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಈಚೆಗೆ ನಡೆದ ‘ಪರಿಸರವಾದಿ ಅಂಬೇಡ್ಕರ್’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ಗಿಡಮರ ಇಲ್ಲದಿದ್ದಲ್ಲಿ ಬದುಕಲು ಸಾಧ್ಯವಿಲ್ಲ. ಮರಗಳು ಇಲ್ಲದಿದ್ದರೆ ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನ ಉಲ್ಬಣಿಸುತ್ತದೆ. ಬಿಸಿಲಿನ ಮಟ್ಟ ಏರಿಕೆ ಕಾಣುತ್ತದೆ. ಗಿಡಮರ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗಬೇಕು. ಪ್ರತಿ ಜೀವಿಗೂ ಜೀವಿಸುವ ಹಕ್ಕಿದೆ. ಅದರ ಆವಾಸ ಸ್ಥಾನ ಕಸಿದುಕೊಳ್ಳಲು ಯಾರಿಗೂ ಹಕ್ಕಿಲ್ಲ ಎಂದರು.
‘ಬಿ.ಆರ್. ಅಂಬೇಡ್ಕರ್ ಸಮಾನತೆಯ ಹರಿಕಾರ. ಗಾಂಧೀಜಿ ಉಪ್ಪಿನ ಸತ್ಯಾಗ್ರಹ ನಡೆಸಿದಂತೆ, ನೀರಿಗಾಗಿ ಚಳವಳಿ ನಡೆಸಿದವರು ಅಂಬೇಡ್ಕರ್. ಅದುವೇ, ಮಹಾಡ್ ಚೌದಾರ್ ಕೆರೆ ಹೋರಾಟ’ ಎಂದು ತಿಳಿಸಿದರು.
ಅಂಬೇಡ್ಕರ್ ಅವರು ಗೋಮಾಳ, ಹುಲ್ಲುಗಾವಲು ಮತ್ತಿತರ ಜಾನುವಾರು ಪೂರಕ ವಿಚಾರ ತಂದಿದ್ದರು.
ಅವರು ಪರಿಸರ ವಾದಿಯಾಗಿದ್ದರು ಎಂದರು.
ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಉಪ ಪೊಲೀಸ್ ಆಯುಕ್ತರಾದ ಕೆ.ಎಸ್. ಸುಂದರ್ ರಾಜ್ ಚಾಲನೆ ನೀಡಿದರು. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ್, ಸಂಜೀವಯ್ಯ ಮೆಮೋರಿಯಲ್ ಟ್ರಸ್ಟ್ನ ಬಿ.ಜಿ. ದಯಾನಂದ್ ಮೂರ್ತಿ, ಶ್ರೀನಿವಾಸ, ಮಣಗಳ್ಳಿ, ಪತ್ರಕರ್ತ ಮೋಹನ್ ಮೈಸೂರು, ಅಧ್ಯಾಪಕರಾದ ಟಿ.ನಿರಂಜನ್ ಕುಮಾರ್, ಐ.ಡಿ.ಲೋಕೇಶ್. ನಿವೃತ್ತ ಗ್ರಂಥಪಾಲಕರಾದ ರಾಮಯ್ಯ, ಕೆ.ಮಹೇಶ್, ಸಂಶೋಧಕರಾದ ಮನು, ಮಹೇಶ್, ಜಯಚಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.