ಮೈಸೂರು: ದೇಶದಲ್ಲಿ ಮುಸ್ಲಿಮರಿಗೆ ಹೋಲಿಸಿದಲ್ಲಿ ಹಿಂದೂಗಳಿಗೆ ಕಡಿಮೆ ಸೌಲಭ್ಯ ಸಿಗುತ್ತಿದ್ದು, ಸಮಾನತೆಯ ಆಧಾರದ ಮೇಲೆ ಸೌಲಭ್ಯಗಳು ಸಿಗಬೇಕು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಒತ್ತಾಯಿಸಿದರು.
ಎಲ್ಲ ಧರ್ಮದವರಿಗೂ ಸಮಾನ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಅವರು ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ದೇಶದಲ್ಲಿ ಈ ಕೂಡಲೇ ಗೋಹತ್ಯೆ ಸಂಪೂರ್ಣ ನಿಷೇಧವಾಗಬೇಕು. ರಾಮಮಂದಿರ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
‘ಗೋಡ್ಸೆ ಪರವಕಾಲತ್ತು ವಹಿಸಿದ ಸಾಧ್ವಿ ಪ್ರಗ್ಯಾ ಸಿಂಗ್ ಚುನಾವಣೆಯಲ್ಲಿ ಗೆದ್ದದ್ದು ನನಗೆ ಅಸಮಾಧಾನ ತಂದಿದೆ. ಅಂಥವರು ಗೆಲ್ಲಬಾರದಿತ್ತು. ಹಿಂದೂ– ಮುಸ್ಲಿಮರ ಭಾವನೆಗಳಿಗೆ ಧಕ್ಕೆ ಆಗದಂತೆ ಸೌಹಾರ್ದತೆಯಿಂದ ಈ ದೇಶದ ಸಮಸ್ಯೆಗಳನ್ನು ಬಗೆಹರಿಸಬೇಕು. ಕಾಶ್ಮೀರದ ಸಮಸ್ಯೆಗಳೂ ಇದು ಅನ್ವಯವಾಗಬೇಕು’ ಎಂದು ಕೋರಿದರು.
‘ಮೂರೂ ಪಕ್ಷಗಳು ಮೈತ್ರಿ ಮಾಡಬೇಕಿತ್ತು. ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ ಸಮ್ಮಿಶ್ರ ಸರ್ಕಾರ ಮಾಡಬೇಕಿತ್ತು. ಈ ಬಗ್ಗೆ ಮುಂಚೆಯೂ ಸಲಹೆ ನೀಡಿದ್ದೆ. ಆದರೆ, ನನ್ನ ಸಲಹೆಗೆ ಮಾನ್ಯತೆ ನೀಡದೇ ಕಾಂಗ್ರೆಸ್ – ಜೆಡಿಎಸ್ ಮಾತ್ರ ಒಂದಾದವು. ಮೂರೂ ಪಕ್ಷಗಳು ಒಂದಾಗಿದ್ದರೆ ಅಭಿವೃದ್ಧಿ ಉತ್ತಮವಾಗಿರುತ್ತಿತ್ತು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.