ADVERTISEMENT

ನಕಲಿ ನೇಮಕಾತಿ ದಂಧೆ ಬಯಲು: ₹ 22 ಕೋಟಿ ವಂಚನೆ ಜಾಲ ಭೇದಿಸಿದ ರೈಲ್ವೆ ಭದ್ರತಾ ಪಡೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 19:55 IST
Last Updated 27 ಅಕ್ಟೋಬರ್ 2021, 19:55 IST
   

ಮೈಸೂರು: ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 400 ಮಂದಿಯಿಂದ ಸುಮಾರು ₹ 22 ಕೋಟಿ ಪಡೆದು ವಂಚಿಸುತ್ತಿದ್ದ ಬೃಹತ್ ಜಾಲವೊಂದನ್ನು ಇಲ್ಲಿನ ರೈಲ್ವೆ ಭದ್ರತಾ ಪಡೆ ಭೇದಿಸಿದೆ.

ಮೈಸೂರಿನ ನಿವಾಸಿ ಚಂದ್ರಗೌಡ ಎಸ್.ಪಾಟೀಲ (44) ಹಾಗೂ ಗದಗ ನಿವಾಸಿ, ರೈಲ್ವೆ ಇಲಾಖೆ ನಿವೃತ್ತ ನೌಕರಶಿವಸ್ವಾಮಿ (62) ಬಂಧಿತರು. ಉದ್ಯೋಗಾಂಕ್ಷಿಗಳು ಸಹಿ ಮಾಡಿರುವ 221 ಖಾಲಿ ಚೆಕ್‌ಗಳು, ₹ 4.15 ಲಕ್ಷ ನಗದು, ಆಕಾಂಕ್ಷಿಗಳ ಮೂಲ ದಾಖಲೆಗಳು, ರೈಲ್ವೆ ಇಲಾಖೆಯ 100 ನಕಲಿ ನೇಮಕಾತಿ ಆದೇಶ ಪತ್ರಗಳನ್ನು ಇವರಿಂದ ವಶ‍ಪಡಿಸಿಕೊಂಡಿದ್ದಾರೆ.

ರೈಲ್ವೆ ಆಸ್ಪತ್ರೆ ಮುಂದೆ ಕೆಲವರನ್ನು ನಿಲ್ಲಿಸಿ ‌ಆರೋಪಿಗಳು ಛಾಯಾಚಿತ್ರ ತೆಗೆಯುತ್ತಿದ್ದದ್ದನ್ನು ಗಮನಿಸಿದ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷರು ರೈಲ್ವೆ ಭದ್ರತಾ ಪಡೆಗೆ ಮಾಹಿತಿ ನೀಡಿದರು. ಈ ಮಾಹಿತಿ ಜಾಡು ಹಿಡಿದ ಆರ್‌ಪಿಎಫ್ ಇನ್‌ಸ್ಪೆಕ್ಟರ್‌ ಸತೀಶ ಹಾಗೂ ನಿಶಾದ್ ನೇತೃತ್ವದ ತಂಡವು ಆರೋಪಿ ಚಂದ್ರೇಗೌಡ ವಾಸವಿದ್ದ ಹೈವೇ ವೃತ್ತ ಸಮೀಪದ ನಿವಾಸದ ಮೇಲೆ ದಾಳಿ ನಡೆಸಿತು.

ADVERTISEMENT

‘ಮೋಸ ಹೋದವರ ಪೈಕಿ ಜಮೀನು ಮಾರಾಟ ಮಾಡಿ, ಹೆಚ್ಚಿನ ಬಡ್ಡಿಗೆ ಕೈಸಾಲ ಪಡೆದು ಹಣ ನೀಡಿದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗದಗ, ಹಾವೇರಿ, ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹಳ್ಳಿಗಳ ಬಡ ಮತ್ತು ಮಧ್ಯಮವರ್ಗದ ಜನರನ್ನೇ ಆರೋಪಿಗಳು ಆಯ್ಕೆ ಮಾಡಿಕೊಳ್ಳುತ್ತಿದ್ದ ಅಂಶ ಗೊತ್ತಾಗಿದೆ.

‘ರೈಲ್ವೆ ಇಲಾಖೆಯಲ್ಲಿ ಉನ್ನತ ಅಧಿಕಾರಿಗಳು ಪರಿಚಯವಿದ್ದು, ಅವರಿಗೆ ಹೇಳಿ ಕೆಲವೇ ತಿಂಗಳಲ್ಲಿ ಉದ್ಯೋಗ ಕೊಡಿಸುತ್ತೇವೆ’ ಎಂಬುದಾಗಿ ನಂಬಿಸುತ್ತಿದ್ದರು. ವೈದ್ಯಕೀಯ ಪರೀಕ್ಷೆಗಾಗಿ ರೈಲ್ವೆ ಆಸ್ಪತ್ರೆಗೆ ಬರುವಂತೆ ಹೇಳುತ್ತಿದ್ದರು. ಛಾಯಾಚಿತ್ರ ತೆಗೆದು, ವೈದ್ಯಕೀಯ ಪರೀಕ್ಷೆಯಲ್ಲಿ ಪಾಸ್ ಮಾಡಿಸುವುದಾಗಿ ಹೇಳಿ ಹಣ
ಪಡೆಯುತ್ತಿದ್ದರು. ವಯೋಮಿತಿ ಮೀರಿದ್ದರೂ ಉದ್ಯೋಗ ಕೊಡಿಸು ವುದಾಗಿ ನಂಬಿಸಿ, ಅವರಿಂದಲೂ ಹಣ ಪಡೆದಿದ್ದರು’ ಎಂದು ಕಾರ್ಯಾಚರಣೆಯಲ್ಲಿ ಭಾಗಿಯಾದ ಇನ್‌ಸ್ಪೆಕ್ಟರ್‌ಒಬ್ಬರು ಮಾಹಿತಿ ನೀಡಿದರು.

ಇಲ್ಲಿನ ಮಂಡಿ ಠಾಣೆಯಲ್ಲಿರೈಲ್ವೆ ಭದ್ರತಾ ಪಡೆಯು ಪ್ರಕರಣ ದಾಖಲಿಸಿ, ಆರೋಪಿಗಳನ್ನು ವಶಕ್ಕೆ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.