ADVERTISEMENT

ಉಚ್ಚಾಟನೆ ಮಾಡಿಲ್ಲ: ನಾನೇ ರಾಜೀನಾಮೆ ನೀಡಿರುವೆ –ರೈತ ಮುಖಂಡ ಮಹಾದೇವನಾಯಕ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:49 IST
Last Updated 10 ಫೆಬ್ರುವರಿ 2026, 5:49 IST
ಮಹದೇವನಾಯಕ
ಮಹದೇವನಾಯಕ   

ಎಚ್.ಡಿ.ಕೋಟೆ: ‘ರಾಜ್ಯ ರೈತ ಸಂಘದ ಸ್ಥಳೀಯ ತಾಲ್ಲೂಕು ಮಟ್ಟದ ಮುಖಂಡರ ನಡವಳಿಕಗೆ ಬೇಸತ್ತು ಒಂದು ತಿಂಗಳ ಹಿಂದೆಯೇ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆದರೆ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ನನ್ನನ್ನು ಸಂಘದಿಂದ ಉಚ್ಚಾಟನೆ ಮಾಡಿದ್ದೇನೆ ಎಂದು ಮಾಧ್ಯಮ ಹೇಳಿಕೆ ನೀಡಿದ್ದಾರೆ. ನಾನು ರಾಜೀನಾಮೆ ನೀಡಿದ ನಂತರ ಅವರು ಮಾಡಿರುವ ಎಲ್ಲ ಆರೋಪಗಳು ಸತ್ಯಕ್ಕೆ ದೂರ’ ಎಂದು ರೈತ ಮುಖಂಡ ಮಹಾದೇವನಾಯಕ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿ ಮಾತನಾಡಿದ ಅವರು, ‘ಬಡಗಲಪುರ ನಾಗೇಂದ್ರ ಬಣದ ರೈತ ಸಂಘಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ತಿಂಗಳ ಹಿಂದೆಯೇ ರಾಜೀನಾಮೆ ನೀಡಿ ಸಂಘದ ಚಟುವಟಿಕೆಯಿಂದ ದೂರು ಉಳಿದಿದ್ದೇನೆ. ಆದರೆ ಬಡಗಲಪುರ ನಾಗೇಂದ್ರ ಅವರು ನನ್ನ ಏಳಿಗೆ ಸಹಿಸಲಾರದೆ ಪಿತೂರಿ ಮಾಡುವ ಸಲುವಾಗಿ ಸಂಘದಿಂದ ಉಚ್ಚಾಟನೆ ಮಾಡಿದ್ದೇನೆ ಎಂದು ಹೇಳಿರುವುದು ಅವರಿಗೆ ಶೋಭೆ ತರುವುದಿಲ್ಲ.  ನಾನೇ ರಾಜೀನಾಮೆ ನೀಡದ ಮೇಲೆ ಹೇಗೆ ಉಚ್ಚಾಟನೆ ಮಾಡಲು ಸಾಧ್ಯ’ ಎಂದು ತಿಳಿಸಿದರು.

‘ಸಂಘದ ಸಭೆಯ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಟ್ಟ ವಿಚಾರವಾಗಿ ಚರ್ಚೆ ನಡೆಯುವ ಸಂಬಂಧ ಸಂಘದ ಓರ್ವ ಸದಸ್ಯನ ಮೇಲೆ ಕೆಲವರು ಹಲ್ಲೆಗೆ ಯತ್ನಿಸಿದಾಗ ಮಧ್ಯಪ್ರವೇಶ ಮಾಡಿದ್ದಕ್ಕೆ ಸಂಘದ ಸದಸ್ಯರಾದ ಶಿವಲಿಂಗಪ್ಪ, ಬಸವರಾಜು ಜಕ್ಕಳ್ಳಿ, ರವಿಕುಮಾರ್ ಜಾತಿ ನಿಂದನೆ ಮಾಡಿದ್ದರು. ಸದಸ್ಯರ ಮಾತಿನಿಂದ ಮನನೊಂದು ನಾನೇ ರಾಜೀನಾಮೆ ನೀಡಿದ್ದೇನೆ’ ಎಂದರು.

ADVERTISEMENT

ಗೋಷ್ಠಿಯಲ್ಲಿ ರೈತ ಮುಖಂಡರಾದ ನಂದೀಶ್, ಚೌಡನಾಯಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.