ಮೈಸೂರು: ಈ ಸಾಲಿನ ಪದ್ಮಭೂಷಣ ಪುರಸ್ಕೃತರಾದ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಮತ್ತು ಪದ್ಮಶ್ರೀ ಪುರಸ್ಕೃತರಾದ ಡಾ.ಖಾದರ್ ಮತ್ತು ಡಾ.ಎಸ್.ಸುಬ್ಬರಾಮನ್ ಅವರ ನಿವಾಸಗಳಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಶನಿವಾರ ಭೇಟಿ ನೀಡಿ, ಅಭಿನಂದಿಸಿದರು.
ಮೊದಲು ಭೈರಪ್ಪನವರ ಮನೆಗೆ ತೆರಳಿದ ಅವರು, ಶಾಲು ಹಾಕಿ ಸನ್ಮಾನಿಸಿದರು.
ನಂತರ ಮಾತನಾಡಿ, ‘ಭೈರಪ್ಪನವರ ಸಾಹಿತ್ಯ ಸಾಧನೆಯು ಅನುಪಮವಾಗಿದ್ದು, ಭಾರತೀಯ ಚಿಂತನೆಗಳನ್ನು ಉದ್ದೀಪಿಸುವಂತಿದೆ. ಅವರಿಗೆ ಪದ್ಮಭೂಷಣ ಪುರಸ್ಕಾರ ಕೊಟ್ಟಿರುವುದರಿಂದ ಪ್ರಶಸ್ತಿಗೆ ಮೌಲ್ಯ ಬಂದಿದೆ’ ಎಂದರು.
‘ಸಿರಿಧಾನ್ಯಗಳನ್ನು ಜನಪ್ರಿಯಗೊಳಿಸುವ ಮೂಲಕ ಡಾ.ಖಾದರ್ ಮತ್ತು ತಾಳೆಗರಿಗಳ ಡಿಜಿಟಲ್ ಅಧ್ಯಯನಕ್ಕೆ ಕಾರಣಕರ್ತರಾಗಿರುವ ಡಾ.ಸುಬ್ಬರಾಮನ್ ಅವರ ಸಾಧನೆ ಅನುಕರಣೀಯವಾದುದು’ ಎಂದು ಸಚಿವರು ಬಣ್ಣಿಸಿದರು.
ಪುರಸ್ಕೃತರ ಕುಟುಂಬದವರು, ಮೇಯರ್ ಶಿವಕುಮಾರ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಮುಖಂಡ ಕವೀಶ್ ಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.