ಮೈಸೂರು: ಬರೋಬ್ಬರಿ ಎರಡು ತಿಂಗಳ ಬಳಿಕ ಬೆಂಗಳೂರು–ಮೈಸೂರು ನಡುವೆ ಸೋಮವಾರ ವಿಮಾನ ಹಾರಾಟ ಆರಂಭಗೊಂಡಿತು.
ಏರ್ ಇಂಡಿಯಾದ ಅಲಯನ್ಸ್ ಏರ್ ಸಂಸ್ಥೆಯ ವಿಮಾನವು ಬೆಂಗಳೂರಿನಿಂದ ಐವರು ಪ್ರಯಾಣಿಕರನ್ನು ಹೊತ್ತು ಹಾರಾಟ ನಡೆಸಿ, ಸಂಜೆ 5.30ಕ್ಕೆ ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಯಿತು.
ಮೈಸೂರಿನಿಂದ ಸಂಜೆ 6.15ಕ್ಕೆ ಮೂವರು ಪ್ರಯಾಣಿಕರನ್ನು ಬೆಂಗಳೂರಿಗೆ ಕರೆದೊಯ್ದಿತು ಎಂದು ವಿಮಾನ ನಿಲ್ದಾಣದ ನಿರ್ದೇಶಕ ಆರ್.ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.
ರದ್ದು: ಮೈಸೂರು–ಬೆಳಗಾವಿ ನಡುವೆ ಹಾರಾಟ ನಡೆಸಬೇಕಿದ್ದ ಟ್ರುಜೆಟ್ ಏರ್ಲೈನ್ಸ್ ವಿಮಾನ ಸೋಮವಾರ ಹಾರಾಟ ನಡೆಸಲಿಲ್ಲ ಎಂದು ವಿಮಾನ ನಿಲ್ದಾಣದ ಮೂಲಗಳು ಖಚಿತಪಡಿಸಿವೆ.
ಸೀಟ್ ಬುಕ್ಕಿಂಗ್ ಆಗದಿದ್ದರಿಂದ ವಿಮಾನ ಹಾರಾಟ ನಡೆದಿಲ್ಲ ಎಂಬುದು ತಿಳಿದು ಬಂದಿದೆ.
ನಿತ್ಯವೂ ಹಾರಾಟ: ‘ಎರಡು ತಿಂಗಳ ಬಳಿಕ ವಿಮಾನ ಹಾರಾಟ ಆರಂಭಗೊಂಡಿದೆ. ಉಡಾನ್ ಯೋಜನೆಯಡಿ ಮಂಡಕಳ್ಳಿ ವಿಮಾನ ನಿಲ್ದಾಣ ಬರುವುದರಿಂದ ಕಡಿಮೆ ಸಂಖ್ಯೆಯ ಪ್ರಯಾಣಿಕರಿದ್ದರೂ ವಿಮಾನಗಳು ಹಾರಾಟ ನಡೆಸಲಿವೆ. ದಿನ ಕಳೆದಂತೆ ಪ್ರಯಾಣಿಕರ ಸಂಖ್ಯೆ ಹೆಚ್ಚುವ ನಿರೀಕ್ಷೆಯಿದೆ’ ಎಂದು ಆರ್.ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.