ಮೈಸೂರು: ಹೈದರಾಬಾದ್, ಗೋವಾ, ಕೊಚ್ಚಿ ನಗರಗಳಿಗೆ ಸಾಂಸ್ಕೃತಿಕ ನಗರಿ ಮೈಸೂರಿನಿಂದ ನೇರ ವಿಮಾನ ಹಾರಾಟ ಶುಕ್ರವಾರ (ಜುಲೈ 19) ಆರಂಭಗೊಳ್ಳುತ್ತಿದೆ.
ಬೆಂಗಳೂರು–ಮೈಸೂರು ನಡುವೆಯೂ ವಿಮಾನ ಹಾರಾಟದಲ್ಲಿನ ಸಮಯ ಬದಲಾವಣೆಗೊಂಡಿದ್ದು, ಉದ್ಯಮ ವಲಯ ಸೇರಿದಂತೆ ಪ್ರವಾಸೋದ್ಯಮಕ್ಕೆ ಇದು ಪೂರಕವಾಗಲಿದೆ.
ಅಲಯನ್ಸ್ ಏರ್ ಸಂಸ್ಥೆ ಈ ಮಾರ್ಗಗಳಲ್ಲಿ ವಿಮಾನ ಹಾರಾಟ ನಡೆಸಲಿದ್ದು, ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ಇನ್ಮುಂದೆ ಹೆಚ್ಚು ಚಟುವಟಿಕೆಯಿಂದ ಕೂಡಿರಲಿದೆ.
ವಿಶಾಖಪಟ್ಟಣಂ–ವಿಜಯವಾಡ–ಬೆಂಗಳೂರು–ಮೈಸೂರು ಮಾರ್ಗದಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನ ಇದೀಗ, ಬೆಂಗಳೂರು–ಮೈಸೂರು ನಡುವಿನ ಹಾರಾಟಕ್ಕೆ ಸೀಮಿತವಾಗಿದೆ. ಸಮಯವೂ ಬದಲಾಗಿದ್ದು, ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ ಎನ್ನಲಾಗಿದೆ.
ಜುಲೈ 27ರಿಂದ ಮೆಮೊ
ಬೆಂಗಳೂರು–ಮೈಸೂರು ನಡುವೆ ವಾರದಲ್ಲಿ ನಾಲ್ಕು ದಿನ ಸಂಚರಿಸುತ್ತಿರುವ ಮೆಮೊ ರೈಲು ಜುಲೈ 27ರಿಂದ, ಭಾನುವಾರ ಹೊರತುಪಡಿಸಿ ಉಳಿದ ಎಲ್ಲ ದಿನಗಳಲ್ಲೂ ಸಂಚರಿಸಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಮೆಮೊ ರೈಲು ಸಂಚಾರದ ವೇಳಾಪಟ್ಟಿಯಲ್ಲೂ ಭಾರಿ ಬದಲಾವಣೆ ನಡೆದಿದ್ದು, ಮಧ್ಯಮ ವರ್ಗದ ಜನರಿಗೆ ತುಂಬಾ ಅನುಕೂಲಕಾರಿಯಾಗಲಿದೆ ಎನ್ನಲಾಗಿದೆ.
‘ಕಾಚಿಗುಡ್ಡ ಸೂಪರ್ ಫಾಸ್ಟ್ ರೈಲು ಬೆಂಗಳೂರಿನಿಂದ ಮೈಸೂರಿಗೆ ವಿಸ್ತರಣೆಯಾದ ಬಳಿಕ ಹೈದರಾಬಾದ್ ಜತೆಗಿನ ವಹಿವಾಟು ಉದ್ಯಮ ವಲಯಕ್ಕೆ ಸುಲಲಿತವಾಗಿದೆ. ಇದೇ ರೀತಿ ಚೆನ್ನೈ ಎಕ್ಸ್ಪ್ರೆಸ್ ವಿಸ್ತರಣೆಯಾದ ಬಳಿಕ ಐಟಿ ಉದ್ಯೋಗಿಗಳಿಗೆ ವರವಾಗಿದೆ’ ಎಂದು ಸಂಸದ ಪ್ರತಾಪ್ ಸಿಂಹ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.