ಎಚ್.ಡಿ.ಕೋಟೆ: ತಾಲ್ಲೂಕಿನ ಮೇಟಿಕುಪ್ಪೆ ವನ್ಯಜೀವಿ ವಲಯದಲ್ಲಿ ಬೆಲೆಬಾಳುವ ಸಾಗುವಾನಿ ಮರಗಳನ್ನು ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳು ಅವಿನಾಶ್ (28) ಎಂಬ ಹಾಡಿ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇದರ ಬೆನ್ನಲ್ಲೆ ಅರಣ್ಯಾಧಿಕಾರಿಗಳು ಹಲ್ಲೆ ನಡೆಸಿದ್ದಾರೆ ಎಂದು ಯುವಕನ ಸೋದರಿ ನೀಲಾ ಮತ್ತು ತಾಯಿ ನೀಲಮ್ಮ ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದೆ ಕಾಡಿನಲ್ಲಿ ಮರ ಕಡಿಯುತ್ತಿದ್ದ ಗುಂಪನ್ನು ಅರಣ್ಯ ಇಲಾಖೆ ಸಿಬ್ಬಂದಿ ಚದುರಿಸಿದರು. ಈ ಗುಂಪಿನಲ್ಲಿ ಹಾಡಿ ಯುವಕ ಕುಮಾರ ಎಂಬುವರು ಇದ್ದರು ಎಂದು ವಾರಂಟ್ ಪಡೆದು ವಶಕ್ಕೆ ಪಡೆಯಲು ಬಂದಿದ್ದಾರೆ. ಆದರೆ, ಕುಮಾರ್ ಸಿಗಲಿಲ್ಲ. ವಾಪಸ್ ತೆರಳುವ ಸಂದರ್ಭದಲ್ಲಿ ಅವಿನಾಶ್ ಎಂಬ ಯುವಕನನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಈ ವೇಳೆ ತಡೆಯಲು ಮುಂದಾದ ಇವರ ಸೋದರಿ ಗರ್ಭಿಣಿ ನೀಲಾ ಹಾಗೂ ತಾಯಿ ನೀಲಮ್ಮ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ವಲಯ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಹೂಗಾರ್, ‘ಆರೋಪ ಸತ್ಯಕ್ಕೆ ದೂರ. ವಶಕ್ಕೆ ಪಡೆದಿರುವ ಅವಿನಾಶ್ ಮೇಲೂ ನಾವು ಹಲ್ಲೆ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ, ಇಬ್ಬರು ಮಹಿಳೆಯರ ಮೇಲೆ ಹಲ್ಲೆಯಾಗಿರುವುದು ನಿಜ ಎಂದು ಗಿರಿಜನ ವಿಸ್ತರಣಾ ಅಧಿಕಾರಿ ರಮೇಶ್ ಹೇಳಿದ್ದಾರೆ. ಹಾಡಿ ಜನರಲ್ಲಿ ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಮಡುಗಟ್ಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.