
ಹುಣಸೂರು: ‘ಅರಣ್ಯ ಹಕ್ಕಿಗೆ ಆಗ್ರಹಿಸಿ ಧರ್ಮಾಪುರ ಹೋಬಳಿ ತರಿಕಲ್ ರಂಗಯ್ಯನ ಹಾಡಿಯ ಗಿರಿಜನರು ಹಾಲಗಂಜಿಹಳ್ಳ ಕಾಡು ಪ್ರದೇಶ ಪ್ರವೇಶಿಸಿ ಪೂರ್ವಜರ ಆರಾಧನಾ ಸ್ಥಳ ಕಾಡುಬಸಪ್ಪ ದೇವರಿಗೆ ಪೂಜೆ ಸಲ್ಲಿಸಿ ಭಿತ್ತಿಪತ್ರ ಪ್ರದರ್ಶಿಸಿದರು.
‘ಅರಣ್ಯ ಇಲಾಖೆ ಕೆಲವು ಕಾಯ್ದೆಗಳಿಂದ ಗಿರಿಜನರು ಅರಣ್ಯಕ್ಕೆ ಪ್ರವೇಶಿಸದಂತಾಗಿದೆ. ಈ ಕಾಯ್ದೆಯಿಂದ ಗಿರಿಜನರ ತಮ್ಮ ಹಕ್ಕನ್ನು ಕಳೆದುಕೊಂಡು ಅರಣ್ಯದಿಂದ ಹೊರ ಬಂದು ಮೂಲಭೂತ ಹಕ್ಕು ಕಳೆದುಕೊಂಡಿದ್ದೇವೆ. ಈ ಎಲ್ಲವನ್ನು ಗಿರಿಜನರಿಗೆ ಹಿಂದಿರುಗಿಸುವುದರಿಂದ ಅರಣ್ಯವನ್ನು ಮತ್ತಷ್ಟು ಕಾಪಾಡಲು ಅರಣ್ಯ ಹಕ್ಕು ಅಗತ್ಯ’ ಎಂದು ಆದಿವಾಸಿ ಜನತಾ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ ಹರ್ಷ ಹೇಳಿದರು.
‘ಅರಣ್ಯ ಹಕ್ಕು ಕಾಯ್ದೆ ಮಾನ್ಯ ಮಾಡಿ ಗಿರಿಜನರಿಗೆ ಅರಣ್ಯ ಪ್ರವೇಶಿಸಿ ತಮ್ಮ ಹಕ್ಕು ಸ್ಥಾಪಿಸಲು ಅವಕಾಶ ಕಲ್ಪಿಸುವಂತೆ 12 ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸಾಮೂಹಿಕ ಅರಣ್ಯ ಹಕ್ಕು, ನೆಲಸುಗಳ ಹಕ್ಕು, ವೈಯಕ್ತಿಕ ಅರಣ್ಯ ಭೂಮಿ ಹಕ್ಕು ನೀಡಬೇಕು’ ಎಂದರು.
‘ಜನವರಿ ತಿಂಗಳಲ್ಲಿ ಆದಿವಾಸಿ ಜನತಾ ಪಾರ್ಲಿಮೆಂಟ್ ಸದಸ್ಯರು ಅಧಿವೇಶನ ಸೇರುತ್ತಿದ್ದು, ಆ ಸಭೆಯಲ್ಲಿ ಅರಣ್ಯ ಹಕ್ಕು ಮಾನ್ಯ ಕಾಯ್ದೆ ಕುರಿತು ಗಿರಿಜನರು ನಡೆಸಿದ ಅಭಿಯಾನ ಕುರಿತಂತೆ ಸಮಗ್ರ ಚರ್ಚೆ ನಡೆಸಲಿದ್ದೇವೆ. ಜನತಾ ಪಾರ್ಲಿಮೆಂಟ್ ಕೈಗೊಳ್ಳುವ ತೀರ್ಮಾನವನ್ನು ವಿಧಾನ ಪರಿಷತ್ ಮತ್ತು ವಿಧಾನಸಭಾಧ್ಯಕ್ಷರಿಗೆ ಮನವಿ ಪ್ರತ ನೀಡಿ ಕಾಯ್ದೆ ಜಾರಿಗೊಳಿಸುವಂತೆ ಮನವಿ ಮಾಡಲಿದ್ದೇವೆ’ ಎಂದರು.
ಆದಿವಾಸಿ ಮುಖಂಡ ವಿಠಲ್ ನಾಣಚ್ಚಿ ಮಾತನಾಡಿದರು.
ಅರಣ್ಯ ಪ್ರವೇಶಿಸಿದ ಗಿರಿಜನರು ತಮ್ಮ ಹಕ್ಕುಗಳಿಗಾಗಿ ಘೋಷಣೆ ಹಾಕಿ ಭೀತ್ತಿ ಪತ್ರ ಪ್ರದರ್ಶಿಸಿದರು. ಪ್ರತಿಭಟನೆಯಲ್ಲಿ ತರಿಕಲ್ ರಂಗಯ್ಯನ ಕೊಲ್ಲಲು ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ದೊಡ್ಡಹೆತ್ತಪ್ಪ ಹಾಗೂ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.