ADVERTISEMENT

ಸಂಸ್ಥಾಪಕರ ದಿನಾಚರಣೆ: ಸೇವೆಯ ಸ್ಮರಣೆ

ಕೆನರಾ ಬ್ಯಾಂಕ್‌ನ ಸಂಸ್ಥಾಪಕರಾದ ಅಮ್ಮೆಂಬಳ ಸುಬ್ಬರಾವ್ ಪೈ 115ನೇ ಜನ್ಮ ದಿನಾಚರಣೆ ಇಂದು

ಡಿ.ಬಿ, ನಾಗರಾಜ
Published 19 ನವೆಂಬರ್ 2020, 1:53 IST
Last Updated 19 ನವೆಂಬರ್ 2020, 1:53 IST
ತಿ.ನರಸೀಪುರ ಪಟ್ಟಣದ ಕೆನರಾ ಬ್ಯಾಂಕ್‌ ಶಾಖೆ ಸಿಎಸ್‌ಆರ್‌ ಅನುದಾನದಡಿ ಹೆಣ್ಣುಮಕ್ಕಳ ಪ್ರೌಢಶಾಲೆಯಲ್ಲಿ ನಿರ್ಮಿಸುತ್ತಿರುವ ಶೌಚಾಲಯ
ತಿ.ನರಸೀಪುರ ಪಟ್ಟಣದ ಕೆನರಾ ಬ್ಯಾಂಕ್‌ ಶಾಖೆ ಸಿಎಸ್‌ಆರ್‌ ಅನುದಾನದಡಿ ಹೆಣ್ಣುಮಕ್ಕಳ ಪ್ರೌಢಶಾಲೆಯಲ್ಲಿ ನಿರ್ಮಿಸುತ್ತಿರುವ ಶೌಚಾಲಯ   

ಮೈಸೂರು: ಗ್ರಾಮೀಣ ಜನರಿಗೆ ಬ್ಯಾಂಕಿಂಗ್‌ ಸೇವೆ ಒದಗಿಸಬೇಕು ಎಂಬ ಧ್ಯೇಯೋದ್ದೇಶದಿಂದ ಹಲವು ದಶಕಗಳ ಹಿಂದೆ ಮಂಗಳೂರಿನಲ್ಲಿ ಆರಂಭಗೊಂಡ ಕೆನರಾ ಬ್ಯಾಂಕ್‌, ಇದೀಗ ದೇಶದಾದ್ಯಂತ ತನ್ನ ಶಾಖೆಗಳನ್ನು ಹೊಂದಿದೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸುವಲ್ಲೂ ಯಶಸ್ವಿಯಾಗಿದೆ.

ಕೆನರಾ ಬ್ಯಾಂಕ್ ಸ್ಥಾಪಕರಾದ ಅಮ್ಮೆಂಬಳ ಸುಬ್ಬರಾವ್ ಪೈ ಜನ್ಮ ದಿನಾಚರಣೆ ಗುರುವಾರ (ನ.19). 115ನೇ ಸಂಸ್ಥಾಪನಾ ದಿನವನ್ನು ಕೆನರಾ ಬ್ಯಾಂಕ್‌ ತನ್ನ ಎಲ್ಲ ಶಾಖೆಗಳಲ್ಲೂ ಆಚರಿಸುತ್ತಿದೆ. ಇದನ್ನು ಅರ್ಥಪೂರ್ಣ ಹಾಗೂ ಸ್ಮರಣಾರ್ಹ ಕಾರ್ಯಕ್ರಮವನ್ನಾಗಿ ರೂಪಿಸಲು, ಜಿಲ್ಲೆಯ ತಿ.ನರಸೀಪುರ ಪಟ್ಟಣದಲ್ಲಿನ ಶಾಖೆ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡಿದೆ.

ಈಗಾಗಲೇ ಗ್ರಾಹಕ ಸ್ನೇಹಿ, ಜನ ಸ್ನೇಹಿ ಶಾಖೆಯಾಗಿ ಕಾರ್ಯ ನಿರ್ವಹಿಸುತ್ತಿರುವ ತಿ.ನರಸೀಪುರದಲ್ಲಿನ ಕೆನರಾ ಬ್ಯಾಂಕ್‌, ವಾರ್ಷಿಕ ₹ 180 ಕೋಟಿಗೂ ಹೆಚ್ಚಿನ ವಹಿವಾಟು ನಡೆಸುತ್ತಿದೆ. ಶಾಖೆ ಮತ್ತಷ್ಟು ಜನ ಪರವಾಗಲು ಸಂಸ್ಥಾಪಕರ ದಿನಾಚರಣೆಯಂದು ಹಲವು ಸ್ಮರಣಾರ್ಹ ಕಾರ್ಯಕ್ರಮ ರೂಪಿಸಿಕೊಂಡಿದೆ.

ADVERTISEMENT

ಸಿಎಸ್‌ಆರ್‌ ಅನುದಾನದಡಿ ಶೌಚಾಲಯ: ತಿ.ನರಸೀಪುರ ಪಟ್ಟಣದಲ್ಲಿನ ಹೆಣ್ಣುಮಕ್ಕಳ ಪ್ರೌಢಶಾಲೆಯಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಇದರ ಪಕ್ಕದಲ್ಲೇ ಶಿಕ್ಷಕರ ತರಬೇತಿ ಕೇಂದ್ರವೂ ಇದೆ.

‘ಶಾಲೆಯಲ್ಲಿನ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರ ತರಬೇತಿ ಕೇಂದ್ರಕ್ಕೆ ತರಬೇತಿಗಾಗಿ ಬರುವ ಮಹಿಳಾ ಶಿಕ್ಷಕಿಯರ ಅನುಕೂಲಕ್ಕಾಗಿ ಕೆನರಾ ಬ್ಯಾಂಕ್‌ ಶಾಖೆ ತನ್ನ ಸಿಎಸ್‌ಆರ್‌ ಅನುದಾನದಡಿ ಪ್ರೌಢಶಾಲೆಯ ಆವರಣದಲ್ಲಿ ₹ 70 ಸಾವಿರ ವೆಚ್ಚದಲ್ಲಿ ಮೂರು ಶೌಚಾಲಯ ನಿರ್ಮಿಸಿದೆ. ಸಂಸ್ಥಾಪಕರ ಜನ್ಮ ದಿನಾಚರಣೆಯಂದು ಶಾಲೆಯ ಆಡಳಿತ ಮಂಡಳಿಗೆ ಈ ನೂತನ ಶೌಚಾಲಯವನ್ನು ಹಸ್ತಾಂತರಿಸಲಿದ್ದೇವೆ’ ಎಂದು ಶಾಖೆಯ ಮುಖ್ಯ ಪ್ರಬಂಧಕ ಎಚ್‌.ಲಕ್ಷ್ಮಣ ‘ಪ್ರಜಾವಾಣಿ’ಗೆ ತಿಳಿಸಿದರು.

115 ಶಾಲೆಗಳಿಗೆ ಸೀಲಿಂಗ್ ಫ್ಯಾನ್‌: 115ನೇ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ತಿ.ನರಸೀಪುರ ತಾಲ್ಲೂಕಿನ 115 ಸರ್ಕಾರಿ ಶಾಲೆಗಳಿಗೆ ತಲಾ ಒಂದೊಂದು ಸೀಲಿಂಗ್ ಫ್ಯಾನ್ ವಿತರಿಸುವ ಯೋಜನೆ ರೂಪಿಸಲಾಗಿದೆ. ನ.19ರ ಗುರುವಾರ ನರಸೀಪುರ ಪಟ್ಟಣದ ಗುರುಭವನದಲ್ಲಿ ನಡೆಯಲಿರುವ ಸಂಸ್ಥಾಪಕರ ದಿನಾಚರಣೆಯಲ್ಲಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗೆ ಈ ಫ್ಯಾನ್‌ಗಳನ್ನು ಹಸ್ತಾಂತರಿಸಲಿದ್ದೇವೆ ಎಂದು ಶಾಖೆಯ ಹಿರಿಯ ಪ್ರಬಂಧಕ ಕೆ.ವಿ.ಶ್ರೀನಿವಾಸ್‌ ಮಾಹಿತಿ ನೀಡಿದರು.

ಗ್ರಾಮೀಣ ಭಾಗದಲ್ಲೂ ಡಿಜಿಟಲೀಕರಣ

ಶಾಖೆ ತನ್ನ ವ್ಯಾಪ್ತಿಯ ಹಳ್ಳಿಗಳಲ್ಲಿ ಡಿಜಿಟಲೀಕರಣಕ್ಕೂ ಒತ್ತು ನೀಡಿದೆ. ದೊಡ್ಡನಹುಂಡಿ, ಶಂಭು ದೇವನಪುರ ಹಾಗೂ ಟಿ.ದೊಡ್ಡಪುರ ಸೇರಿದಂತೆ ಇನ್ನಿತರೆ ಗ್ರಾಮಗಳಲ್ಲಿ ಶಿಬಿರ ನಡೆಸಿದೆ. ಗ್ರಾಮೀಣರಿಗೆ ಡಿಜಟಲೀಕರಣದ ಬಗ್ಗೆ ಮಾಹಿತಿ ಒದಗಿಸಿದೆ.

ಶಾಖೆಯಲ್ಲಿ ಖಾತೆ ಹೊಂದಿರುವ ಹೈನುಗಾರರ ಮನೆಗಳಿಗೆ ತೆರಳಿ ಡೆಬಿಟ್‌ ಕಾರ್ಡ್‌ ಕೊಟ್ಟಿದೆ. ಇದು ರೈತರ ಸಂತಸವನ್ನು ಇಮ್ಮಡಿಗೊಳಿಸಿದೆ ಎನ್ನುತ್ತಾರೆ ಹಿರಿಯ ಪ್ರಬಂಧಕ ಶ್ರೀನಿವಾಸ್‌.

ಅಂಕಿ–ಅಂಶ

115ನೇ:ಸಂಸ್ಥಾಪಕರ ದಿನಾಚರಣೆ ಇಂದು

115; ಸೀಲಿಂಗ್‌ ಫ್ಯಾನ್‌ ವಿತರಣೆ

115:ಫಲಾನುಭವಿಗಳನ್ನು ಅಟಲ್‌ ಪಿಂಚಣಿ ಯೋಜನೆಗೆ ಜೋಡಣೆ

96:ಡೆಬಿಟ್ ಕಾರ್ಡ್ ವಿತರಣೆ ಹೈನುಗಾರರಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.