ಮೈಸೂರು: ಇಲ್ಲಿನ ಪತ್ರಕರ್ತರ ಭವನದಲ್ಲಿ ಶುಕ್ರವಾರ ಮೈಸೂರು ಕನ್ನಡ ವೇದಿಕೆ ವತಿಯಿಂದ ಮೈಸೂರು ಸಂಸ್ಥಾಪಕರನ್ನು ಸ್ಮರಿಸಲಾಯಿತು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಜಯಚಾಮರಾಜ ಒಡೆಯರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಆಯುರ್ ಮಟಂ ಸಂಸ್ಥಾಪಕ ಡಾ.ಮನು ಬಿ.ಮೆನನ್, ಕ್ರೀಡಾ ತರಬೇತದಾರ ಶ್ರೀಶಾಭಟ್, ಪತ್ರಕರ್ತ ಕಮಲ್ ಗೋಪಿನಾಥ್, ಬಿ.ರಾಘವೇಂದ್ರ, ರೋಟರಿ ಸಂಘದ ಅಧ್ಯಕ್ಷ ರಾಜೀವ್, ಸಮಾಜ ಸೇವಕರಾದ ಎಚ್.ಎಸ್.ದಾಸ್, ಶಿವಂ ಅಕಾಡೆಮಿಯ ಡಿ.ಆಯುಷ್ಮನ್, ಚಿರಬಾಂಧವ್ಯ ಟ್ರಸ್ಟ್ನ ಕೆ.ಆರ್.ರವಿಕುಮಾರ್ ಅವರಿಗೆ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು.
ಪ್ರಶಸ್ತಿ ವಿತರಿಸಿ ಮಾತನಾಡಿದ ದೂರದರ್ಶನ ‘ಚಂದನ’ ವಾಹಿನಿಯ ವಿಶ್ರಾಂತ ಹೆಚ್ಚುವರಿ ಮಹಾನಿರ್ದೇಶಕ ಮಹೇಶ್ ಜೋಷಿ, ‘ಯಾವುದೇ ಅರ್ಜಿ ಸ್ವೀಕರಿಸದೇ ಪ್ರಶಸ್ತಿ ನೀಡಿದ್ದು ಒಳ್ಳೆಯ ಬೆಳವಣಿಗೆ’ ಎಂದು ಶ್ಲಾಘಿಸಿದರು. ‘ಆದರೆ, ಮಹಿಳೆಯರನ್ನೂ ಪ್ರಶಸ್ತಿ ನೀಡುವಲ್ಲಿ ಪರಿಗಣಿಸಬೇಕು’ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಮುಖಂಡ ಎಂ.ಕೆ.ಸೋಮಶೇಖರ್ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಮಾದರಿಯಾಗಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವದ ಮಾದರಿಯನ್ನು ದೇಶಕ್ಕೆ ಪರಿಚಯಿಸಿದ್ದು, ಸಾಮಾಜಿಕ ನ್ಯಾಯಕ್ಕೆ ಅವಿರತವಾಗಿ ಶ್ರಮಿಸಿದ್ದು, ಜಲಾಶಯಗಳ ನಿರ್ಮಾಣ, ಜನರ ಕಷ್ಟಗಳನ್ನು ಆಲಿಸಿದ್ದು ಸೇರಿದಂತೆ ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ ಎಂದರು.
ನಿವೃತ್ತ ಪ್ರಾಧ್ಯಾಪಕ ಪಿ.ವಿ.ನಂಜರಾಜ ಅರಸು, ಉಪಮೇಯರ್ ಪಿ.ಶ್ರೀಧರ್, ವೇದಿಕೆಯ ಅಧ್ಯಕ್ಷ ಎಸ್.ಬಾಲಕೃಷ್ಣ, ಹೋರಾಟಗಾರ ನಾಲಾಬೀದಿ ರವಿ, ಶಿಕ್ಷಕ ಸಾ.ಸಿ.ದೊರೆಸ್ವಾಮಿ ಹಾಗೂ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.