ADVERTISEMENT

ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ ಪಾಸ್‌: ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ

ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 9:51 IST
Last Updated 12 ಅಕ್ಟೋಬರ್ 2020, 9:51 IST
ಎಂ.ಚಂದ್ರಪ್ಪ
ಎಂ.ಚಂದ್ರಪ್ಪ   

ಮೈಸೂರು: ‘ಕಟ್ಟಡ ಕಾರ್ಮಿಕರು ತಮ್ಮ ಕೆಲಸದ ನಿಮಿತ್ತ ರಾಜ್ಯದ ವಿವಿಧೆಡೆ ಸಂಚರಿಸಲು ಅನುಕೂಲವಾಗುವಂತೆ ನಿಗಮದಿಂದ ಉಚಿತವಾಗಿ ಬಸ್‌ ಪಾಸ್ ನೀಡಲಾಗುವುದು’ ಎಂದು ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ ಸೋಮವಾರ ಇಲ್ಲಿ ತಿಳಿಸಿದರು.

ಕೆಎಸ್‌ಆರ್‌ಟಿಸಿಯ ಮೈಸೂರು ನಗರ/ಗ್ರಾಮಾಂತರ ವಿಭಾಗದ ಅಧಿಕಾರಿಗಳ ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮೈಸೂರು ಜಿಲ್ಲೆಯಲ್ಲಿನ 60,600 ಕಟ್ಟಡ ಕಾರ್ಮಿಕರಿಗೆ ಪ್ರಾಯೋಗಿಕವಾಗಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ. ನಂತರದ ದಿನಗಳಲ್ಲಿ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು’ ಎಂದು ಹೇಳಿದರು.

‘ಕೋವಿಡ್‌ನಿಂದ ತತ್ತರಿಸಿರುವ ಕೂಲಿ ಕಾರ್ಮಿಕರಿಗೆ ನೆರವಾಗಲಿಕ್ಕಾಗಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ಕೂಲಿ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಜಿಲ್ಲೆಯಿಂದ ಜಿಲ್ಲೆಗೆ ಉಚಿತವಾಗಿ ಪ್ರಯಾಣಿಸಲು ಸಹಕಾರಿಯಾಗಲಿದೆ’ ಎಂದರು.

ADVERTISEMENT

‘ಕೋವಿಡ್‌ನಿಂದ ಕೆಎಸ್‌ಆರ್‌ಟಿಸಿಗೆ ₹ 1,600 ಕೋಟಿ ನಷ್ಟವಾಗಿದೆ. ಪ್ರಯಾಣಿಕರ ಅಗತ್ಯತೆಗೆ ಅನುಸಾರವಾಗಿ ನಾಡಹಬ್ಬ ದಸರಾ ಮಹೋತ್ಸವಕ್ಕೆ ಮೈಸೂರು ಗ್ರಾಮಾಂತರ ಭಾಗದಿಂದ 70 ಹಾಗೂ ನಗರ ವಿಭಾಗದಿಂದ 20 ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಒದಗಿಸಲಾಗುವುದು. ಲಾಭದ ಹಿತಾಸಕ್ತಿಗಿಂತ ಸಾರ್ವಜನಿಕರ ಸೇವೆಗೆ ಒತ್ತು ನೀಡುತ್ತೇವೆ’ ಎಂದು ಚಂದ್ರಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.