ADVERTISEMENT

ಒಂದೇ ಬಗೆಯಲ್ಲಿ ಮೂವರಿಗೆ ಸೈಬರ್ ವಂಚನೆ

‘ಓಟಿಪಿ’ ಸಂಖ್ಯೆ ಪಡೆದು ವಂಚಿಸಿದ ಕಳ್ಳರು

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 20:05 IST
Last Updated 21 ಜುಲೈ 2019, 20:05 IST

ಮೈಸೂರು: ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ ಮೂರು ಕಡೆ ಎಟಿಎಂ ಕಾರ್ಡ್ ಸಂಖ್ಯೆ ಹಾಗೂ ‘ಓಟಿಪಿ’ ಸಂಖ್ಯೆ ಪಡೆದು ಕಳ್ಳರು ಸಾವಿರಾರು ರೂಪಾಯಿ ಹಣವನ್ನು ವಂಚಿಸಿದ್ದಾರೆ. ನಂಜನಗೂಡು, ಕೆ.ಆರ್.ನಗರ ಹಾಗೂ ಪಿರಿಯಾಪಟ್ಟಣ ತಾಲ್ಲೂಕುಗಳಲ್ಲಿ ವಂಚಕರು ಒಂದೇ ಬಗೆಯಲ್ಲಿ ಮೂವರನ್ನು ವಂಚಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಏನಿದು ವಂಚನೆ?

ನಂಜನಗೂಡು ತಾಲ್ಲೂಕಿನ ಕೆಂಪಿಸಿದ್ದನಹುಂಡಿ ಗ್ರಾಮದ ಎಸ್.ರವಿಕುಮಾರ್ ಎಂಬುವವರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾನೆ. ಎಟಿಎಂ ಅಮಾನ್ಯವಾಗಿದ್ದು, ಅದನ್ನು ಚಾಲನೆ ಮಾಡಲು ಕಾರ್ಡ್ ಸಂಖ್ಯೆ ಹೇಳಿ ಎಂದಿದ್ದಾನೆ. ಕಾರ್ಡ್‌ ಸಂಖ್ಯೆ ಹೇಳಿದ ಬಳಿಕ ‘ಓಟಿಪಿ’ ಸಂಖ್ಯೆಯನ್ನೂ ಕೇಳಿದ್ದಾನೆ. ರವಿಕುಮಾರ್ ‘ಓಟಿಪಿ’ ಸಂಖ್ಯೆಯನ್ನೂ ನೀಡಿದ್ದಾರೆ. ನಂತರ, ಪರಿಶೀಲನೆ ನಡೆಸಿದಾಗ ₹ 99,998 ಖಾತೆಯಿಂದ ತೆಗೆದಿರುವುದು ಗೊತ್ತಾಗಿದೆ.

ADVERTISEMENT

ಇದೇ ಬಗೆಯಲ್ಲಿ ಕೆ.ಆರ್.ನಗರ ತಾಲ್ಲೂಕಿನ ಹೊಸರಾಮೇನಹಳ್ಳಿ ಗ್ರಾಮದ ಆರ್.ರಾಜೇಂದ್ರಪ್ರಸಾದ್ ಅವರಿಗೆ ₹ 52,597 ಹಾಗೂ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಸಮೀಪದ ಕೊತ್ತನಹಳ್ಳಿಕೊಪ್ಪಲು ಗ್ರಾಮದ ಕೆ.ಎಂ.ಶೃತಿ ಎಂಬುವವರ ಖಾತೆಯಿಂದ ₹ 36,964 ಹಣವನ್ನು ಪಡೆದು ವಂಚಿಸಲಾಗಿದೆ.

ಈ ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಜಿಲ್ಲಾ ಸೈಬರ್ ಅಪರಾಧ, ಆರ್ಥಿಕ ಅಪರಾಧಗಳು ಮತ್ತು ಮಾದಕ ವಸ್ತು ನಿಯಂತ್ರಣ ವಿಶೇಷ ಠಾಣೆಯ ಪೊಲೀಸರು ವಂಚಕರ ಪತ್ತೆಗೆ ಬಲೆ ಬೀಸಿದ್ದಾರೆ.

ಅಪಘಾತಕ್ಕೆ ಪಾದಚಾರಿ ಬಲಿ

ಮೈಸೂರು: ಇಲ್ಲಿನ ಹುಣಸೂರು ಮುಖ್ಯರಸ್ತೆಯ ಹೂಟಗಳ್ಳಿ ಬಳಿ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಾಂತರಾಜು ಎಂಬುವವರಿಗೆ ವಾಹನವೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಕ್ಕಿ ಹೊಡೆದ ವಾಹನದ ಸುಳಿವು ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಿ.ವಿ ಪುರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆ

ಮೈಸೂರು: ಕೇರಳಾದ ಮೋಯಿದ್ (45) ಎಂಬ ಕೂಲಿಕಾರ್ಮಿಕರೊಬ್ಬರು ಇಲ್ಲಿನ ರಾಯನಕೆರೆ ಬಸ್‌ನಿಲ್ದಾಣದಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ಕೌಟುಂಬಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ‍ಪೊಲೀಸರು ತಿಳಿಸಿದ್ದಾರೆ. ಮೈಸೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.