ADVERTISEMENT

ಗಜಪಡೆ ಸಾಂಘಿಕ ಸ್ಫೂರ್ತಿ ಅನಾವರಣ

ಕುಶಾಲತೋಪು ತಾಲೀಮು: ಬೆಚ್ಚಿದ ಆನೆಗಳಿಗೆ ಒತ್ತಾಸೆಯಾದ ಅಭಿಮನ್ಯು, ಮಹೇಂದ್ರ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 4:40 IST
Last Updated 20 ಸೆಪ್ಟೆಂಬರ್ 2025, 4:40 IST
ಜಂಬೂಸವಾರಿ ವೇಳೆ 'ಅಭಿಮನ್ಯು' ನೇತೃತ್ವದ ಗಜಪಡೆ ಹಾಗೂ ಅಶ್ವಪಡೆ ಬೆಚ್ಚದಂತೆ ಮಾಡಲು ಮೈಸೂರಿನ ದಸರಾ ವಸ್ತುಪ್ರದರ್ಶನ ಮೈದಾನದ ವಾಹನ ನಿಲ್ದಾಣದ ಅಂಗಳದಲ್ಲಿ ಶುಕ್ರವಾರ ಕುಶಾಲತೋವು ತಾಲೀಮನ್ನು ಪೊಲೀಸ್ ಸಿಬ್ಬಂದಿ ನಡೆಸಿದಾಗ ಫಿರಂಗಿಗಳಿಂದ ಹೊಮ್ಮಿದ ಬೆಂಕಿಯುಂಡೆ.. ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.
ಜಂಬೂಸವಾರಿ ವೇಳೆ 'ಅಭಿಮನ್ಯು' ನೇತೃತ್ವದ ಗಜಪಡೆ ಹಾಗೂ ಅಶ್ವಪಡೆ ಬೆಚ್ಚದಂತೆ ಮಾಡಲು ಮೈಸೂರಿನ ದಸರಾ ವಸ್ತುಪ್ರದರ್ಶನ ಮೈದಾನದ ವಾಹನ ನಿಲ್ದಾಣದ ಅಂಗಳದಲ್ಲಿ ಶುಕ್ರವಾರ ಕುಶಾಲತೋವು ತಾಲೀಮನ್ನು ಪೊಲೀಸ್ ಸಿಬ್ಬಂದಿ ನಡೆಸಿದಾಗ ಫಿರಂಗಿಗಳಿಂದ ಹೊಮ್ಮಿದ ಬೆಂಕಿಯುಂಡೆ.. ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.   

ಮೈಸೂರು: ಫಿರಂಗಿಗಳಿಂದ ಸಿಡಿದ ‘ಕುಶಾಲತೋಪಿ’ಗೆ ‘ಅನುಭವಿ’ ಆನೆಗಳು ಅಂಜಲಿಲ್ಲ. ‘ಕ್ಯಾಪ್ಟನ್‌’ ಅಭಿಮನ್ಯು, ಮಹೇಂದ್ರ, ಏಕಲವ್ಯ ಧ್ಯಾನಸ್ಥರಾಗಿದ್ದರು. ಮೊದಲು ಬೆದರಿದವರಿಗೆ ಒತ್ತಾಸೆಯಾಗಿ ನಿಂತ ದೃಶ್ಯವು ಅನುಭವತೆಯನ್ನು ಸಾರಿತು. 

ನಗರದ ವಸ್ತುಪ್ರದರ್ಶನ ಮೈದಾನದ ವಾಹನ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ 9.30ಕ್ಕೆ ಕುಶಾಲತೋಪಿನ ಎರಡನೇ ತಾಲೀಮು ಯಶಸ್ವಿಯಾಗಿ ನಡೆಯಿತು. ಮೊದಲ ತಾಲೀಮಿನಲ್ಲಿ ಹೆದರಿದ್ದ ‘ಶ್ರೀಕಂಠ’ ಮತ್ತು ‘ಹೇಮಾವತಿ’ ಆರಂಭದಲ್ಲಿ ಸ್ವಲ್ಪ ಬೆಚ್ಚಿದ್ದರು. ‘ಅನುಭವಿಗಳು’ ಅವರನ್ನು ಸಮಾಧಾನಿಸಿದ ಬಗೆಯು ತಂಡದ ಸಾಂಘಿಕ ಸ್ಫೂರ್ತಿಯನು ಸಾರಿತು.  

ಜಂಬೂಸವಾರಿಗೆ 13 ದಿನವಷ್ಟೇ ಇದ್ದು, ಗಜಪಡೆ ಹಾಗೂ ಅಶ್ವಪಡೆ ಸಜ್ಜುಗೊಳಿಸುವ ಪ್ರಕ್ರಿಯೆ ಬಿರುಸಾಗಿದೆ. ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ಸಿದ್ದನಗೌಡ ಪಾಟೀಲ್, ಎಸಿಪಿ ಕುಮಾರಸ್ವಾಮಿ ನೇತೃತ್ವದಲ್ಲಿ ಫಿರಂಗಿ ದಳದ 35 ಸಿಬ್ಬಂದಿ 7 ಫಿರಂಗಿಗಳಲ್ಲಿ ಮೂರು ಸುತ್ತಿನಂತೆ 21 ಸಿಡಿಮದ್ದು ಹಾರಿಸಿದರು.

ADVERTISEMENT

ಫಿರಂಗಿಗೆ ಸಿಡಿಮದ್ದನ್ನು ಹಾಕಿದ ನಂತರ ಅದಕ್ಕೆ ಬೆಂಕಿ ಹೊತ್ತಿಸಲು ರಂಜಕದ ಪುಡಿ ಹಾಕಿ, ಬೆಂಕಿ ತಾಕಿಸಿದೊಡನೆ ಕುಶಾಲತೋಪುಗಳು ಸಿಡಿದವು. ನಂತರ ಮಿಂಚಿನ ವೇಗದಲ್ಲಿ ನೀರಿನಿಂದ ತೇವಗೊಂಡಿದ್ದ ತೆಂಗಿನನಾರಿನಲ್ಲಿ ಮಾಡಿರುವ ‘ಸಿಂಬ’ವನ್ನು ಬ್ಯಾರಲ್‌ಗೆ ತೂರಿಸಿ ಬೆಂಕಿ ಕಿಡಿ ಹಾಗೂ ಮದ್ದಿನ ಚೂರನ್ನು ಆರಿಸಿ ತೆಗೆಯಲಾಯಿತು. ಇದೇ ವಿಧಾನವನ್ನು ಮೂರು ಬಾರಿ ಸಿಬ್ಬಂದಿ ಮಾಡಿದರು.

ಏಕಾಏಕಿ ಭಾರಿ ಪ್ರಮಾಣದ ಶಬ್ದ ಕೇಳಿದರೆ ಗಜಪಡೆ ಹಾಗೂ ಅಶ್ವಪಡೆ ಮತ್ತೆ ಆತಂಕಕ್ಕೀಡಾಗುವುದರಿಂದ ತಾಲೀಮಿಗೂ ಮುನ್ನ ಆನೆಗಳ ಮುಂದೆ ಆಟಂ ಬಾಂಬ್ ಸಿಡಿಸಿ ಪ್ರಯೋಗ ಮಾಡಲಾಯಿತು. ಪಟಾಕಿ ಸಿಡಿತದ ಶಬ್ದಕ್ಕೆ ಒಗ್ಗಿಕೊಂಡವು. ಆ ನಂತರ ಸಿಡಿಮದ್ದು ಸಿಡಿಸಲಾಯಿತು. ಸದ್ದಿಗೆ ಬೆಚ್ಚುವ ‘ಧನಂಜಯ’ನೂ ಅಲುಗಾಡಲಿಲ್ಲ.

ಬೆದರಿದ 6 ಕುದುರೆ:

35 ಕುದುರೆಗಳಲ್ಲಿ 6 ಕುದುರೆಗಳು ಬೆದರಿ ನಿಯಂತ್ರಣ ಕಳೆದುಕೊಂಡವು. ಅದರಲ್ಲೂ ಎರಡು ಕುದುರೆಗಳು ಕಾಂಪೌಂಡ್ ಕಡೆ ತೆರಳಿ ಮೇಲಕ್ಕೆ ಎಗರ ತೊಡಗಿದವು. ಈ ವೇಳೆ ಕುದುರೆ ಮೇಲೆ ಕುಳಿತಿದ್ದ ಮೌಂಟೆಂಡ್ ಸಿಬ್ಬಂದಿ ಕುದುರೆ ಕೆಳಗಿಳಿದು ಸಂತೈಸಿದರು.  

ಅರಣ್ಯ ಇಲಾಖೆಯ ಮೈಸೂರು ವೃತ್ತದ ಮುಖ್ಯ ಅರಣ್ಯಾಧಿಕಾರಿ ರವಿಶಂಕರ್, ಡಿಸಿಎಫ್ ಐ.ಬಿ.ಪ್ರಭುಗೌಡ, ಆರ್‌ಎಫ್‌ಒ ನದೀಮ್, ಪಶುವೈದ್ಯ ಆದರ್ಶ್, ಸಹಾಯಕರಾದ ರಂಗರಾಜು, ಅಕ್ರಂ ಪಾಲ್ಗೊಂಡಿದ್ದರು. ‌‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.