
ನಂಜನಗೂಡು: ‘ಇಲ್ಲಿನ ಶ್ರೀಕಂಠೇಶ್ವರಸ್ವಾಮಿ ದೊಡ್ಡ ಜಾತ್ರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ಮಾರ್ಚ್ 22ರಿಂದ 29ರವರೆಗೆ ಐತಿಹಾಸಿಕ ಪರಂಪರೆಯನ್ನು ಬಿಂಬಿಸುವ ಅದ್ದೂರಿ ಗರಳಪುರಿ ಉತ್ಸವವನ್ನು ನಡೆಸಲು ತೀರ್ಮಾನಿಸಲಾಗಿದೆ’ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಗರಳಪುರಿ ಉತ್ಸವದ ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ರಾಜ್ಯದ ಹಂಪಿ ಉತ್ಸವ, ಬೆಂಗಳೂರಿನ ಕರಗ ಉತ್ಸವ, ಕನಕಪುರದ ಕನಕೋತ್ಸವ ಮಾದರಿಯಲ್ಲಿ ಗರಳಪುರಿ ಉತ್ಸವವನ್ನು ನಡೆಸಲಾಗುವುದು, ಉತ್ಸವದ ಮೂಲಕ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸಿ ಅವರ ಕಲೆಗೆ ವೇದಿಕೆ ಕಲ್ಪಿಸಿ ಕೊಡುವುದು ಸೇರಿದಂತೆ ನಗರದ ಪರಂಪರೆ, ಐತಿಹಾಸಿಕ ಹಿನ್ನೆಲೆಯನ್ನು ಜನರಿಗೆ ತಿಳಿಸಿ ಅರಿವು ಮೂಡಿಸುವ ಉದ್ದೇಶದಿಂದ ಉತ್ಸವವನ್ನು ಆಯೋಜಿಸಲಾಗುತ್ತಿದೆ’ ಎಂದು ಹೇಳಿದರು.
22ರಂದು ಬೆಳಿಗ್ಗೆ ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿ ಯೋಗಪಟುಗಳಿಂದ ಯೋಗಾಸನ ಪ್ರದರ್ಶನ, ಮಧ್ಯಾಹ್ನ ನಗರದ ಸಿಟಿಜನ್ ಶಾಲೆಯ ಆವರಣದಲ್ಲಿ ಚದುರಂಗ ಸ್ಪರ್ಧೆ ನಡೆಯಲಿದೆ, 23ರಂದು ಜಾನಪದ ಗಾಯನ ಸ್ಪರ್ಧೆ, 24ರಂದು ವಿದ್ಯಾರ್ಥಿಗಳಿಗಾಗಿ ವಚನ ಕಂಠಪಾಠ ಸ್ಪರ್ಧೆ, 25ರಂದು ಕೇಶವಿನ್ಯಾಸ ಸ್ಪರ್ಧೆ , ವೇಷ ಭೂಷಣ ಸ್ಪರ್ಧೆ ನಡೆಯಲಿವೆ.
ಯುವ ಕಾಂಗ್ರೆಸ್ವತಿಯಿಂದ 26ರಂದು ಉತ್ತಮ ಸಾಮಾಜಿಕ ಸಂದೇಶವುಳ್ಳ ರೀಲ್ಸ್ ಸ್ಪರ್ಧೆ, 27ರಂದು ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, 28ರಂದು ಮೆಹಂದಿ ಸ್ಪರ್ಧೆ, 29ರಂದು ಬೆಳಿಗ್ಗೆ ‘ಆರೋಗ್ಯಕರ ನಾಳೆಗಾಗಿ ಒಂದಾಗಿ ನಡೆಯೋಣ’ ಎಂಬ ಶೀರ್ಷಿಕೆ ಅಡಿಯಲ್ಲಿ ವಾಕಥಾನ್ ಅನ್ನು ಆಯೋಜಿಸಲಾಗಿದೆ. ಅದೇ ದಿನ ಸಂಜೆ ನಗರದ ವಿದ್ಯಾವರ್ಧಕ ಮೈದಾನದಲ್ಲಿ ವೀಣಾವಾದನ, ಭರತನಾಟ್ಯ ಕಾರ್ಯಕ್ರಮ ಸೇರಿದಂತೆ ಸಮಾರೋಪ ಸಮಾರಂಭವನ್ನು ನಡೆಸಿ ಸ್ಪರ್ಧೆಯಲ್ಲಿ ಜಯಗಳಿಸಿದವರಿಗೆ ಬಹುಮಾನ ವಿತರಿಸಲಾಗುವುದು’ ಎಂದು ಹೇಳಿದರು.
ಸಭೆಯಲ್ಲಿ ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಸಿ.ಎಂ.ಶಂಕರ್, ವಿಧಾನಸಭಾ ಉಸ್ತುವಾರಿ ಹಿರೇಹಳ್ಳಿ ಸೋಮೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಕೆ.ಮಾರುತಿ, ಕೃಷ್ಣಪ್ಪ, ನಗರಸಭಾ ಮಾಜಿ ಅಧ್ಯಕ್ಷ ಶ್ರೀಕಂಠಸ್ವಾಮಿ, ಮುಖಂಡರಾದ ನಾಗೇಶ್ ರಾಜು, ಗೋವಿಂದರಾಜು, ಜಿ.ಬಸವರಾಜು, ಕಳಲೆ ಮಹೇಶ್, ಕಳಲೆ ರಾಜೇಶ್, ಎಸ್.ಪಿ.ಮಹೇಶ್, ಕೆಪಿಸಿಸಿ ಸದಸ್ಯ ಅಕ್ಬರ್ ಅಲೀಂ, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಮಹೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.