ADVERTISEMENT

ಹುಣಸೂರು | ತಾರತಮ್ಯದಿಂದ ಅಭಿವೃದ್ಧಿ ಮರೀಚಿಕೆ; ಶಾಸಕ ಜಿ.ಡಿ.ಹರೀಶ ಗೌಡ

₹ 3 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ: ಶಾಸಕ ಜಿ.ಡಿ.ಹರೀಶ ಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 5:21 IST
Last Updated 1 ಆಗಸ್ಟ್ 2025, 5:21 IST
ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿ ಭಾಗದಲ್ಲಿ ಗುರುವಾರ 3 ಕೋಟಿ ರೂಪಾಯಿ ವೆಚ್ಚದ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಾಸಕ ಜಿ.ಡಿ.ಹರೀಶ್‌ ಗೌಡ ಭೂಮಿ ಪೂಜೆ ನೆರವೇರಿಸಿದರು 
ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿ ಭಾಗದಲ್ಲಿ ಗುರುವಾರ 3 ಕೋಟಿ ರೂಪಾಯಿ ವೆಚ್ಚದ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಾಸಕ ಜಿ.ಡಿ.ಹರೀಶ್‌ ಗೌಡ ಭೂಮಿ ಪೂಜೆ ನೆರವೇರಿಸಿದರು    

ಹುಣಸೂರು: ಮುಂಗಾರು ಮಳೆ ಆರ್ಭಟಕ್ಕೆ ತಾಲ್ಲೂಕಿನ ಗ್ರಾಮೀಣ ಭಾಗದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಈ ರಸ್ತೆ ದುರಸ್ತಿಗೆ ಸರ್ಕಾರದಿಂದ ನೀಡುವ ಅನುದಾನ ಒಂದು ಗ್ರಾಮಕ್ಕೆ ಸಾಲದಾಗಿದೆ ಎಂದು ಶಾಸಕ ಜಿ.ಡಿ.ಹರೀಶ ಗೌಡ ಹೇಳಿದರು.

ತಾಲ್ಲೂಕಿನ ಹನಗೋಡು ಹೋಬಳಿ ಭಾಗದ ಕಿರಂಗೂರು, ನೇರಳಕುಪ್ಪೆ, ದೊಡ್ಡಹೆಜ್ಜೂರು ಪಂಚಾಯಿತಿಗೆ ಸೇರಿದ ಗ್ರಾಮಗಳಲ್ಲಿ ₹ 3 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

‘ಮುಂಗಾರಿನಲ್ಲಿ ಹನಗೋಡು ಹೋಬಳಿ ಭಾಗದಲ್ಲಿ ಅತಿಯಾದ ಮಳೆಗೆ ಗ್ರಾಮೀಣ ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ. ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲು ಸರ್ಕಾರ ಶಾಸಕರಿಗೆ ಅಗತ್ಯ ಅನುದಾನ ವಿತರಿಸದೆ ತಾರತಮ್ಯ ಅನುಸರಿಸಿ ಅಭಿವೃದ್ಧಿ ಮರೀಚಿಕೆಯಾಗಿದೆ’ ಎಂದು ವಿಷಾದಿಸಿದರು.

ADVERTISEMENT

‘ವಿರೋಧ ಪಕ್ಷದ ಶಾಸಕರ ಕ್ಷೇತ್ರಕ್ಕೆ ಸರ್ಕಾರ ಅನುದಾನ ಕಡಿತಗೊಳಿಸಿ ಆಡಳಿತ ಪಕ್ಷದ ಶಾಸಕರ ಕ್ಷೇತ್ರಕ್ಕೆ ₹ 50 ಕೋಟಿ ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಚುನಾವಣೆ ಬಳಿಕ ಅಭಿವೃದ್ಧಿ ದೃಷ್ಟಿಕೋನದಲ್ಲಿ ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಗೆ ಆಡಳಿತಾರೂಢ ಸರ್ಕಾರ ಸಮಾನವಾಗಿ ಪರಿಗಣಿಸಿ ಅನುದಾನ ನೀಡುವುದರಿಂದ ರಾಜ್ಯದ ಅಭಿವೃದ್ಧಿಗೆ ಪೂರಕವಾಗಲಿದೆ’ ಎಂದರು.

ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಸುಭಾಷ್‌, ಉಪತಹಶೀಲ್ದಾರ್ ಚೆಲುವರಾಜು, ಗ್ರಾ.ಪಂ. ಸದಸ್ಯ ನಾಣ್ಯಕುಮಾರಿ, ಜಗದೀಶ್.‌ ಚಂದ್ರಶೇಖರ್‌, ಪ್ರಭಾಕರ್‌ ಹೆಗಡೆ, ಕಂದಾಯ ಇಲಾಖೆ ರಾಜಸ್ವ ನಿರೀಕ್ಷಣಾಧಿಕಾರಿ ನಂದೀಶ್‌, ಸೆಸ್ಕ್‌ ಅಧಿಕಾರಿ ದಿಲೀಪ್‌ ಸೇರಿದಂತೆ ಇತರರಿದ್ದರು.

ಗ್ರಾಮೀಣ ಭಾಗದಲ್ಲಿನ ಕುಡಿಯುವ ನೀರು ಒಳಗೊಂಡಂತೆ ಪೈಪ್‌ ಲೈನ್ ವ್ಯವಸ್ಥೆ ಸರಿಪಡಿಸಲು ಅನುದಾನದ ಅಗತ್ಯವಿದೆ. ಈ ಕಾಮಗಾರಿ ನಡೆಸಲು ಜಿ.ಪಂ. ಮತ್ತು ತಾ.ಪಂ.ಗಳಿಂದ ಯಾವುದೇ ಅನುದಾನವಿಲ್ಲವಾಗಿದೆ
ಜಿ.ಡಿ.ಹರೀಶ ಗೌಡ ಶಾಸಕ

ಅಭಿವೃದ್ಧಿ ಕಾಮಗಾರಿಗೆ ಏಷ್ಟೆಷ್ಟು ಅನುದಾನ.. ಶಿಂಡೇನಹಳ್ಳಿ ಗ್ರಾಮದ ಮುಖ್ಯ ರಸ್ತೆ ಸಿ.ಸಿ ಮತ್ತು ಚರಂಡಿ ಕಾಮಗಾರಿಗೆ ₹ 75 ಲಕ್ಷ ಅಬ್ಬೂರು ಗ್ರಾಮದ ರಸ್ತೆಗೆ ₹ 30 ಲಕ್ಷ ಕಿರಂಗೂರು ರಸ್ತೆ ಮತ್ತು ಚರಂಡಿ ಕಾಮಗಾರಿಗೆ ₹ 50 ಲಕ್ಷ ಹರಳಹಳ್ಳಿ ಬೋವಿ ಕಾಲೊನಿ ಅಂಗನವಾಡಿ ಕಟ್ಟಡ ಕಾಮಗಾರಿ ನಿರ್ಮಾಣಕ್ಕೆ ₹20 ಲಕ್ಷ ಶಂಕರಪುರ ಹಾಡಿ ಅಂಗನವಾಡಿ ಕಟ್ಟಡ ಕಾಮಗಾರಿ ₹ 20 ಲಕ್ಷ ಹನಗೋಡು ದೊಡ್ಡಹೆಜ್ಜೂರು ಮಾರ್ಗ ಕೊಣನಹೊಸಹಳ್ಳಿ ಲೋಕೋಪಯೋಗಿ ಇಲಾಕೆ ರಸ್ತೆ ಅಭಿವೃದ್ಧಿಗೆ ₹ 1 ಕೋಟಿ ವೀರನಹೊಸಹಳ್ಳಿ ಕೆರೆ ಹಾಡಿಯಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿಗೆ ₹ 20 ಲಕ್ಷ ನಾಗಾಪುರ 6ನೇ ಬ್ಲಾಕ್‌ ಅಂಗನವಾಡಿ ಕಟ್ಡಡ ಕಾಮಗಾರಿ ₹20 ಲಕ್ಷದಲ್ಲಿ ನಿರ್ಮಾಣಗೊಳ್ಳಲಿದೆ ಎಂದು ಶಾಸಕ ಜಿ.ಡಿ.ಹರೀಶ ಗೌಡ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.