ADVERTISEMENT

ಬಾಗಿಲು ಮೀಟಿ ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 1:46 IST
Last Updated 8 ಅಕ್ಟೋಬರ್ 2020, 1:46 IST

ನಂಜನಗೂಡು: ಇಲ್ಲಿಯ ವಿದ್ಯಾನಗರ ಬಡಾವಣೆಯಲ್ಲಿ ಮಾಲೀಕರು ಊರಿಗೆ ಹೋಗಿದ್ದನ್ನು ಕಂಡ ದುಷ್ಕರ್ಮಿಗಳು ಮಂಗಳವಾರ ರಾತ್ರಿ ಮನೆ ಬಾಗಿಲು ಮೀಟಿ ಚಿನ್ನಾಭರಣ ದೋಚಿದ್ದಾರೆ.

ಧರಣಿಕುಮಾರ್ ಎಂಬುವವರ ಮನೆಯಲ್ಲಿ ದರೋಡೆ ನಡೆದಿದ್ದು, ಅಂದಾಜು ₹ 4 ಲಕ್ಷ ಮೌಲ್ಯದ 75 ಗ್ರಾಂ ಚಿನ್ನ, 300 ಗ್ರಾಂ ಬೆಳ್ಳಿ ಹಾಗೂ ₹ 15 ಸಾವಿರ ನಗದು ದೋಚಿದ್ದಾರೆ.

ವಿವಿಧ ಕಂಪನಿಯ ಉತ್ಪನ್ನಗಳ ಮಾರಾಟ ಏಜೆನ್ಸಿ ನಡೆಸುವ ಧರಣಿಕುಮಾರ್ ಕುಟುಂಬದೊಂದಿಗೆ ಬೆಂಗಳೂರಿಗೆ ತೆರಳಿದ್ದರು. ಆಗ ಕಳ್ಳತನ ನಡೆದಿದೆ. ಶಬ್ದ ಕೇಳಿ ನೆರೆಹೊರೆಯವರು ಎಚ್ಚರವಾಗಿದ್ದನ್ನು ಕಂಡು ಮಾಲೀಕನ ಬೈಕ್‌ ಬಳಸಿ ಪರಾರಿಯಾಗಿದ್ದು, ಬೈಕ್‌ನ್ನು ಮಲ್ಲನಮೂಲೆ ಮಠದ ಬಳಿ ಬಿಟ್ಟು ಹೋಗಿದ್ದಾರೆ.

ADVERTISEMENT

ಸ್ಥಳಕ್ಕೆ ಬಂದ ಡಿ.ವೈ.ಎಸ್.ಪಿ. ಪ್ರಭಾಕರ್ ರಾವ್ ಶಿಂಧೆ, ಸಿ.ಪಿ.ಐ ಲಕ್ಷ್ಮಿಕಾಂತ ತಳವಾರ್, ಪಿ.ಎಸ್.ಐ ಸತೀಶ್ ಪರಿಶೀಲಿಸಿದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ತಪಾಸಣೆ ನಡೆಸಿದರು.

ಈ ಕುರಿತು ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.